ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತರಾತುರಿಯಲ್ಲಿ ಸ್ವಿಟ್ಜರ್ಲ್ಯಾಂಡ್ ಪ್ರವಾಸ ಕೈಗೊಂಡಿರುವುದು ಸ್ವಿಸ್ ಬ್ಯಾಂಕ್ನಲ್ಲಿ ಇಟ್ಟಿರುವ ಹಣವನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದಕ್ಕೆ ಎಂಬ ಅನುಮಾನಗಳು ಕಾಡುತ್ತಿವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಸ್ವಿಸ್ ಬ್ಯಾಂಕ್ನಲ್ಲಿರುವ ಹಣವನ್ನು, ಪಕ್ಷ ಅಧಿಕಾರಕ್ಕೆ ಬಂದ ನೂರು ದಿನದೊಳಗೆ ಭಾರತಕ್ಕೆ ತರುತ್ತೇವೆ ಎಂದು ನಾವು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಈ ಸಂದರ್ಭದಲ್ಲಿಯೇ ಡಿ.ಕೆ.ಶಿವಕುಮಾರ್ ಅವರು ಪ್ರವಾಸ ಕೈಗೊಂಡಿರುವುದು ಅನುಮಾನಕ್ಕೆ ಕಾರಣ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಚುನಾವಣೆ ಮುಗಿದು ಫಲಿತಾಂಶ ಬರುವ ಸಂದರ್ಭದಲ್ಲಿ ಒಂದು ಪಕ್ಷದ ಕಾರ್ಯಾಧ್ಯಕ್ಷರು ಇಲ್ಲಿರುವುದಿಲ್ಲ ಎಂದರೆ ಏನರ್ಥ?ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅವರು ಸ್ವಿಟ್ಜರ್ಲ್ಯಾಂಡ್ ಪ್ರವಾಸ ಕೈಗೊಂಡಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದರು. ಅವರೊಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಆ ಕಾರಣಕ್ಕಾಗಿಯಾದರು ಅವರು ಸ್ವಿಟ್ಜರ್ಲ್ಯಾಂಡ್ ಪ್ರವಾಸದ ರಹಸ್ಯವನ್ನು ಜನರ ಮುಂದಿಡಲಿ ಎಂದು ಒತ್ತಾಯಿಸಿದರು. |