ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಗೂ ಮುನ್ನ ರಾಷ್ಟ್ರ ರಾಜಕಾರಣದ ದೆಹಲಿಯ ಪಡಸಾಲೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿದೆ. ಅದಕ್ಕೆ ಪೂರಕ ಎಂಬಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೂ ಕೂಡ ಗುರುವಾರ ಕಾಂಗ್ರೆಸ್ ವರಿಷ್ಠೆ ಸೋನಿಯ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಇಂದು ದೆಹಲಿಗೆ ತೆರಳಿದ್ದ ಕೃಷ್ಣ ಅವರು, ಜೆಡಿಎಸ್ ಜತೆಗಿನ ಒಪ್ಪಂದಕ್ಕೆ ತಮ್ಮ ಸಹಮತ ಇರುವುದಾಗಿ ತಿಳಿಸಿದ್ದಾರೆಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ರಾಜ್ಯರಾಜಕಾರಣದ ಕುರಿತಾಗಿ ಸೋನಿಯಗಾಂಧಿ ಅವರೊಡನೆ ಚರ್ಚಿಸಿರುವುದಾಗಿ ಹೇಳಿದ ಅವರು, ಭೇಟಿ ಉದ್ದೇಶ ಹಾಗೂ ರಹಸ್ಯ ಮಾತುಕತೆಯ ವಿವರಗಳನ್ನು ಬಿಟ್ಟುಕೊಟ್ಟಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿದೆಯಲ್ಲ ಎಂದು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕೃಷ್ಣ ಅವರನ್ನು ಪ್ರಶ್ನಿಸಿದಾಗ, ಅದರಲ್ಲಿ ತಪ್ಪೇನಿಲ್ಲ,ಜಾತ್ಯತೀತ ಶಕ್ತಿಗಳು ಒಂದಾಗಬೇಕಿದ್ದರೆ ಒಪ್ಪಂದ ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದರು.
ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ವರಿಷ್ಠೆ ಸೋನಿಯ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ, ಇದೀಗ ಸೋನಿಯ ಗಾಂಧಿ ಅವರು ಎಸ್.ಎಂ.ಅವರೊಂದಿಗೆ ಚರ್ಚೆ ನಡೆಸುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಜತೆಗೆ ಕಾಂಗ್ರೆಸ್ ಒಪ್ಪಂದ ಗಟ್ಟಿಗೊಳ್ಳುವಂತಾಗಿದೆ.
ಒಟ್ಟಾರೆ ಕರ್ನಾಟಕ ರಾಜಕೀಯ ಬೆಳವಣಿಗೆ, ಜೆಡಿಎಸ್ ಜತೆಗಿನ ಮುಂದಿನ ಸಖ್ಯ ಸೇರಿದಂತೆ ಹಲವಾರು ವಿಷಯಗಳ ಚರ್ಚೆ ನಡೆದಿದೆ ಎನ್ನಲಾಗಿದೆ. ಇನ್ನಳಿದಂತೆ ಮೇ 16ರಂದು ಫಲಿತಾಂಶ ಪ್ರಕಟಗೊಂಡ ಬಳಿಕ ಮುಂದಿನ ಬೆಳವಣಿಗೆ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. |