' ನಾವೇನು ಸನ್ಯಾಸಿಗಳಲ್ಲ, ಹಲವು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದು ತ್ಯಾಗ ಮಾಡಿದವರಿದ್ದಾರೆ. ಬಹಳಷ್ಟು ಜನರಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ನವಗಾಗಿರುವ ನೋವನ್ನು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿಯೇ ಹೇಳಿಕೊಳ್ಳುತ್ತೇವೆ' ಎಂಬಂತಹ ಅಸಮಾಧಾನದ ನುಡಿಮುತ್ತುಗಳನ್ನು ಉದುರಿಸಿದವರು ಬುಧವಾರ ರಾತ್ರಿ ಕೆಲವು ಶಾಸಕರೊಂದಿಗೆ ರಹಸ್ಯ ಸಭೆ ನಡೆಸಿದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ.ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಮ್ಮ ಅತೃಪ್ತಿಯನ್ನು ಬಹಿರಂಗವಾಗಿಯೇ ಹೊರಹಾಕಿದರು. ನಮ್ಮ ಯಡಿಯೂರಪ್ಪನವರು ಐದು ವರ್ಷ ಮುಖ್ಯಮಂತ್ರಿಗಳಾಗಿ ಒಳ್ಳೆಯ ಆಡಳಿತ ನೀಡಬೇಕೆಂಬುದು ನಮ್ಮ ಬಯಕೆ. ಬಿಜೆಪಿಯಲ್ಲಿ ಯಾವುದೇ ಅತೃಪ್ತಿ ಇಲ್ಲ. ಕೇವಲ ಲಿಂಗಾಯಿತ ಶಾಸಕರು ಸಭೆ ನಡೆಸಿಲ್ಲ. ಎಲ್ಲಾ ಧರ್ಮದ ಶಾಸಕರು ಸೇರಿ ಸಭೆ ನಡೆಸಿ ನಮ್ಮ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಚರ್ಚಿಸಿದೆವು ಎಂದು ಸಭೆಯ ವಿಚಾರವನ್ನು ಮೊಟಕುಗೊಳಿಸಿದರು.ಬಿಜೆಪಿಯಲ್ಲಿ ಒಗ್ಗಟ್ಟೂ ಇದೆ, ಮೂಲ ಬಿಜೆಪಿ ಕಾರ್ಯಕರ್ತರಿಗೆ ಬಹಳಷ್ಟು ನೋವು ಇದೆ ಎಂದು ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರಗೆಡವಲು ಆರಂಭಿಸಿದರು. ಆಪರೇಶನ್ ಕಮಲದ ಮೂಲಕ ಇತರೆ ಪಕ್ಷಗಳಿಂದ ಬಂದವರಿಗೆ ಅಧಿಕಾರ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.ಅಧಿಕಾರ ಕೇಳಬಾರದು ಎಂಬ ನಿಯಮವೇನಿಲ್ಲ. ನಾವೇನೂ ಸನ್ಯಾಸಿಗಳಲ್ಲ. 3-4 ಬಾರಿ ಶಾಸಕರಾದವರಿಗೆ ಅಧಿಕಾರ ಸಿಕ್ಕಿಲ್ಲ. ಬಹಳಷ್ಟು ಜನ ಸಮರ್ಥ ನಾಯಕರಿದ್ದಾರೆ. ಜನಸಂಘದಿಂದ ದುಡಿದ ಕಾರ್ಯಕರ್ತರಿದ್ದಾರೆ. ಅವರೆಲ್ಲಾ ನಿಗಮ ಮಂಡಳಿ, ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು. |