' ನಾಪತ್ತೆಯಾಗಿರುವ ಬಾಲಕಿಯನ್ನು ಪತ್ತೆ ಹಚ್ಚಲು ನಿಮ್ಮಿಂದ ಆಗುತ್ತಿಲ್ಲ, ಇನ್ನು ನೀವು ಆತಂಕವಾದಿಗಳನ್ನು ಹೇಗೆ ಕಂಡುಹಿಡಿಯುತ್ತೀರಿ?, ನಾಪತ್ತೆ ಪ್ರಕರಣಗಳಲ್ಲಿ ನೀವು ಬುದ್ದ ಬಳಸದಿದ್ದರೂ ಪರವಾಗಿಲ್ಲ, ಕನಿಷ್ಠ ಸಾಮಾನ್ಯ ಜ್ಞಾನವನ್ನಾದರೂ ಉಪಯೋಗಿಸಿ' ಹೀಗೆಂದು ಪೊಲೀಸ್ ಇಲಾಖೆಯನ್ನು ರಾಜ್ಯ ಹೈಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡ ಪರಿ ಇದು.ಇದೇ ರೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಬಾರಿ ಕೋರ್ಟ್ನಿಂದ ತರಾಟೆಗೆ ಒಳಗಾದ ಪೊಲೀಸ್ ಇಲಾಖೆಯನ್ನು ನ್ಯಾಯಮೂರ್ತಿ ರಾಮಮನೋಹರ ರೆಡ್ಡಿ ನೇತೃತ್ವದ ವಿಭಾಗೀಯ ಪೀಠ ನಿನ್ನೆ ಮತ್ತೆ ಛೀಮಾರಿ ಹಾಕಿತ್ತು.ಕೋಲಾರ ಜಿಲ್ಲೆಯ ಗೌರಿಬಿದನೂರಿನ ನಾಲ್ಕುವರೆ ವರ್ಷದ ಮೌನಶ್ರೀ ನಾಪತ್ತೆ ಪ್ರಕರಣವಾಗಲೀ, ನಗರದ ಇಂದಿರಾನಗರದ ನಿವಾಸಿ ರೇಖಾ ಎಂಬ ಯುವತಿ ಕಾಣೆಯಾಗಿರುವ ಪ್ರಕರಣ ಸೇರಿದಂತೆ ಹೈಕೋರ್ಟ್ ಮೆಟ್ಟಿಲೇರಿರುವ ಅನೇಕ ಪ್ರಕರಣಗಳಲ್ಲಿ ಪೊಲೀಸರು ಇದುವರೆಗೂ ಯಶಸ್ವಿ ಆಗದೇ ಇದ್ದುದು ಕೋರ್ಟ್ ಅಸಮಾಧಾನಕ್ಕೆ ಮೂಲವಾಗಿತ್ತು.ಏತನ್ಮಧ್ಯೆ ಮೌನಶ್ರೀ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ಬಾರಿ ಹೈಕೋರ್ಟ್ನಿಂದ ತರಾಟೆಗೆ ಒಳಗಾದ ನಂತರ ಎಚ್ಚೆತ್ತುಕೊಂಡ ಸಿಓಡಿ ಅಧಿಕಾರಿಗಳು, ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಬಾಲಕಿಯನ್ನು ಪತ್ತೆ ಹಚ್ಚು ಕಾರ್ಯದಲ್ಲಿ ತೊಡಗಿದ್ದಾರೆ. |