ಲೋಕಸಭಾ ಚುನಾವಣೆಯ ಮತಎಣಿಕೆಯ ಕೇಂದ್ರದ ಸುತ್ತ ಶನಿವಾರ ಬೆಳಿಗ್ಗೆನಿಂದಲೇ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರ ಅಭಿಮಾನಿಗಳು ಸೇರಿದ್ದರು. ಬಳಿಕ ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಪಕ್ಷದ ಅಭ್ಯರ್ಥಿಗಳ ಗೆಲುವಿನ ಸಂಭ್ರಮದಲ್ಲಿ ಪಾಲ್ಗೊಂಡರು. ಇದೀಗ ಎಲ್ಲೆಡೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಗೆಲುವಿನ ಸಂಭ್ರಮವನ್ನು ಆಚರಿಸಿದರು.
ಮತ ಎಣಿಕೆ ಕೇಂದ್ರದಲ್ಲಿ ಪ್ರತಿ ಹಂತದ ಮತ ಎಣಿಕೆಯು ಮುಗಿದ ನಂತರ ಯಾವ ಅಭ್ಯರ್ಥಿಗಳು ಮುನ್ನಡೆಯಲ್ಲಿ ಇದ್ದಾರೆ ಎಂದು ಧ್ವನಿವರ್ಧಕದಲ್ಲಿ ಘೋಷಣೆಯಾಗುತ್ತಿದ್ದಂತೆಯೇ ಆಯಾ ಅಭ್ಯರ್ಥಿಗಳು ಕುಣಿದು ಕುಪ್ಪಳಿಸಿ ಜಯಕಾರದ ಘೋಷಣೆಗಳನ್ನು ಮೊಳಗಿಸುತ್ತಿದ್ದು ಸಾಮಾನ್ಯ ದೃಶ್ಯವಾಗಿತ್ತು.
ವಿವಿಧ ಪಕ್ಷಗಳ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮಟೆ, ಡೋಲುಗಳ ಸಮೇತ ಬಂದಿದ್ದ ಕಾರ್ಯಕರ್ತರು ಮನ ಬಂದಂತೆ ಕುಣಿದು ಗೆಲುವಿನ ಸಂಭ್ರಮವನ್ನು ಆಚರಿಸಿದರು. ಅಲ್ಲದೇ ಕೆಲವರಂತು ಗುಂಡಿನ ನಶೆಯಲ್ಲಿ ತೂರಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಎಲ್ಲಾ ಮತ ಎಣಿಕೆ ಮುಗಿದು ಅಭ್ಯರ್ಥಿ ಗೆಲುವು ಘೋಷಣೆಯಾಗುತ್ತಿದ್ದಂತೆಯೇ ವಿಜಯಗಳಿಸಿದ ಅಭ್ಯರ್ಥಿಯ ಕೊರಳಿಗೆ ಹಾರ ಹಾಕಿ, ಬಣ್ಣ ಎರಚಿ ಭುಜದ ಮೇಲೆ ಕುಳ್ಳಿರಿಸಿಕೊಂಡು ಜೈಕಾರ ಹಾಕುತ್ತಿದ್ದದ್ದು ಎಲ್ಲೆಡೆ ಕಂಡು ಬಂತು ಸಂಭ್ರಮದಲ್ಲಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಟ್ಟರು. |