ಲೋಕಸಭೆ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಇದೀಗ ದೆಹಲಿಯಲ್ಲಿ ಸರ್ಕಾರ ರಚನೆಗಾಗಿ ಕಸರತ್ತು ನಡೆಯುತ್ತಿದ್ದರೆ, ಇತ್ತ ರಾಜ್ಯದಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಧುರೀಣರಲ್ಲಿ ಮಂತ್ರಿಗಿರಿಗಾಗಿ ಪೈಪೋಟಿ ಶುರುವಾಗಿದೆ.ಸತತ ಆರು ಬಾರಿ ಕೋಲಾರ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ ಅವರು ಸೋನಿಯಾ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಅದರ ಬೆನ್ನಲ್ಲೇ ಸೋಲಿಲ್ಲದ ಸರದಾರ ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ಜಯಭೇರಿ ಬಾರಿಸಿರುವ ಮಲ್ಲಿಕಾರ್ಜುನ ಖರ್ಗೆ ಕೂಡ ಭಾನುವಾರ ಮಧ್ನಾಹ್ನ ದೆಹಲಿ ಪ್ರಯಾಣ ಬೆಳೆಸಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಅಲ್ಲದೇ ಮಾಜಿ ಮುಖ್ಯಮಂತ್ರಿ, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ವಿಜಯಿಯಾಗಿರುವ ಎಂ.ವೀರಪ್ಪ ಮೊಯ್ಲಿ ಕೂಡ ದೆಹಲಿಯತ್ತ ಪ್ರಯಾಣಿಸಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿನ ಓಟದಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದರು ಕೂಡ, ಮಂತ್ರಿಗಿರಿಗಾಗಿ ಈಗಾಗಲೇ ತುರುಸಿನ ಪೈಪೋಟಿ ಆರಂಭವಾಗಿದೆ. ಆದರೆ ಸೋನಿಯಾ ಕೃಪಾಕಟಾಕ್ಷ ಯಾರ ಮೇಲೆ ಇದೆಯೋ ಎಂದು ಕಾದುನೋಡಬೇಕಾಗಿದೆ. |