ಕೇಂದ್ರದ ಯುಪಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಇದೀಗ ಸಚಿವ ಸ್ಥಾನಕ್ಕಾಗಿ ಕಸರತ್ತು ನಡೆಸುತ್ತಿರುವ ಎಚ್ಡಿಕೆ ಯುಪಿಎ ವರಿಷ್ಠೆ ಸೋನಿಯ ಗಾಂಧಿ ಅವರ ಜತೆ ಮಾತುಕತೆ ನಡೆಸುವ ನಿಟ್ಟಿನಲ್ಲಿ ಭಾನುವಾರ ಸಂಜೆ ಅನಿಲ್ ಲಾಡ್ ಜತೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ.ಯುಪಿಎ ಮೈತ್ರಿಕೂಟಕ್ಕೆ 11 ಸೀಟುಗಳ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಫಲಿತಾಂಶಕ್ಕೂ ಮುನ್ನ ಸೋನಿಯ ಭೇಟಿ ಮಾಡಿ ಮಾತುಕತೆ ನಡೆಸಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮತ್ತೆ ತಮ್ಮ ರಾಜಕೀಯ ವರಸೆ ಮುಂದುವರಿಸಿದ್ದು, ಸೋನಿಯ ಜತೆಗಿನ ಮಾತುಕತೆ ಫಲ ನೀಡುವ ನಿರೀಕ್ಷೆ ಇರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.ಮತ್ತೊಂದೆಡೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ದೇವೇಗೌಡ ಅವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಕುಮಾರಸ್ವಾಮಿ ಈ ವಿಚಾರವನ್ನು ಬಹಿರಂಗ ಪಡಿಸುತ್ತಿಲ್ಲ ಎನ್ನಲಾಗಿದೆ. ಜೆಡಿಎಸ್ ಮುಂದಿನ ನಿಲುವು ಕುರಿತಂತೆ ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಯುಪಿಎಗೆ ಬೆಂಬಲ ನೀಡಬೇಕೆ ಬೇಡವೆ ಎಂಬ ಬಗ್ಗೆ ಕುಮಾರಸ್ವಾಮಿ ಮತ್ತು ದೇವೇಗೌಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಜೆಡಿಎಸ್ ನ ನೂತನ ಸಂಸದ ಚೆಲುವರಾಯ ಸ್ವಾಮಿ ತಿಳಿಸಿದ್ದಾರೆ. ದೇವೇಗೌಡರೊಂದಿಗೆ ಚರ್ಚಿಸಿದ ವಿಚಾರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು. 15ನೇ ಲೋಕಸಭೆ ಚುನಾವಣೆಯಲ್ಲಿ 261 ಸ್ಥಾನಗಳನ್ನು ಪಡೆದಿರುವ ಯುಪಿಎ ಒಕ್ಕೂಟಕ್ಕೆ ಇನ್ನೂ11 ಸಂಸದರ ಬೆಂಬಲ ಅಗತ್ಯವಿದೆ. ಮೂರು ಸಂಸದರ ಬಲವನ್ನು ಹೊಂದಿರುವ ಜೆಡಿಎಸ್ ಬೆಂಬಲ ನೀಡುವಂತೆ ಕಾಂಗ್ರೆಸ್ ಕೋರಿದೆ. |