ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರಿಂದ ಹಿಡಿದು ಪ್ರತಿಯೊಬ್ಬರು ನಿರೀಕ್ಷೆಯಂತೆ ಕೆಲಸ ಮಾಡಿದ್ದಾರೆ. ಎಲ್ಲವೂ ಸುಸೂತ್ರವಾಗಿ ಮುಗಿದು ತೃಪ್ತಿತಂದಿದೆ. ವಸ್ತುಸ್ಥಿತಿ ಹೀಗಿದ್ದು ಯಾವುದೇ ಸಚಿವರ ತಲೆದಂಡ ಪ್ರಶ್ನೆ ಉದ್ಭವಿಸದು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ, ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ಆಗುಹೋಗುಗಳ ಚರ್ಚೆಗೆ ಮೇ 21 ರಂದು ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದೆ. ಇನ್ನೆರಡು ತಿಂಗಳಿನಲ್ಲಿ ನಿಗಮ ಮಂಡಳಿ ನೇಮಕಾತಿ ಪ್ರಕ್ರಿಯೆ ಮುಗಿಯಲಿದೆ. ನಟಿ ಶ್ರುತಿ ರಾಜೀನಾಮೆ ಪ್ರಸ್ತಾಪ ಪಕ್ಷದ ಮುಂದಿಲ್ಲ ಎಂದು ಅವರು ತಿಳಿಸಿದರು.ರಾಜ್ಯ ರಾಜಕಾರಣಿ ಸಭೆಯನ್ನೂ ಸದ್ಯದಲ್ಲೇ ನಡೆಸಿ ಚುನಾವಣೆ, ಆಡಳಿತದ ಮುಂದಿನ ಹೆಜ್ಜೆಗಳ ಕುರಿತು ಮಂಥನ ನಡೆಯಲಿದೆ. ನಿಗಮ ಮಂಡಳಿ ನೇಮಕಾತಿ ಪ್ರಕ್ರಿಯೆಯನ್ನು ಇನ್ನೆರಡು ತಿಂಗಳಿನಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೆರಡು ಕಡೆ ಸಣ್ಣಪುಟ್ಟ ವ್ಯತ್ಯಾಸಗಳು ಬೇರೆ ರಾಜಕೀಯ ವಿಚಾರದಿಂದ ನಡೆದಿದೆ. ಕಾರ್ಯಕರ್ತರಿಂದ ಸಚಿವರವರೆಗೂ ಸಾಂಘಿಕ ಹೋರಾಟ ಮಾಡಿದ್ದಾರೆ ಎಂದು ತೃಪ್ತಿ ವ್ಯಕ್ತಪಡಿಸಿದರು. ಬೇರೆ ಪಕ್ಷದಲ್ಲಿ ಇದ್ದು, ಅಲ್ಲಿ ಮಾಡಿದ ತಪ್ಪನ್ನು ಬಿಜೆಪಿ ಸೇರಿ ತಿದ್ದಿಕೊಳ್ಳಬಹುದು. ಆ ಕಾರಣದಿಂದ ಆಪರೇಷನ್ ಕಮಲ ಮುಂದುವರಿಯುತ್ತದೆ ಎಂದು ಅವರು ಮತ್ತೊಮ್ಮೆ ಪುನರುಚ್ಚರಿಸಿದರು. |