ಜೆಡಿಎಸ್ ಮುಖಂಡ ವಿಜಯ್ ಕುಮಾರ್ ಕೊಂಡಜ್ಜಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹರಿಹರ ಶಾಸಕ ಬಿ.ಪಿ.ಹರೀಶ್ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದಾವಣಗೆರೆ ಜಿಲ್ಲಾ ತ್ವರಿತ ನ್ಯಾಯಾಲಯ ಸೋಮವಾರ ಕೂಡ ತಿರಸ್ಕರಿಸಿದೆ.
ಕೊಂಡಜ್ಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್ ವಿರುದ್ಧ ಕೊಲೆ, ಜಾತಿನಿಂದನೆ ಆರೋಪ ಪ್ರಕರಣ ದಾಖಲಾಗಿತ್ತು. ಕಳೆದ ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಏಕನಾಥ್ ರಾಯ್ಕರ್, ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದರು. ಇದೀಗ ತಲೆಮರೆಸಿಕೊಂಡಿರುವ ಶಾಸಕ ಹರೀಶ್ ಜಾಮೀನು ಅರ್ಜಿಯನ್ನು ಇಂದು ಕೂಡ ವಜಾಗೊಳಿಸಿದೆ. . 2ನೇ ಹಂತದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಜೆಡಿಎಸ್ ಮುಖಂಡ ಕೊಂಡಜ್ಜಿ ಸಾವನ್ನಪ್ಪಿದ್ದರು. ಘಟನೆಗೆ ಕುರಿತಂತೆ ಶಾಸಕ ಹರೀಶ್ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ದೂರು ದಾಖಲಾಗಿತ್ತು.
ಈಗಾಗಲೇ 5ಮಂದಿಯನ್ನು ಪೊಲೀಸರು ಬಂಧಿಸಿದ್ದು, ಶಾಸಕ ಹರೀಶ್ ಸೇರಿದಂತೆ ನಾಲ್ವರು ತಲೆಮರೆಸಿಕೊಂಡಿದ್ದಾರೆ. ನಿರೀಕ್ಷಣಾ ಜಾಮೀನಿಗಾಗಿ ಶಾಸಕ ಹರೀಶ್ ಅವರು ಕಳೆದ ಗುರುವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ದಾವಣಗೆರೆ ಸತ್ರ ಜಿಲ್ಲಾ ಸತ್ರ ನ್ಯಾಯಾಲಯ ನೀಡಿರುವ ತೀರ್ಪಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿ ಹರೀಶ್ ಪರ ವಕೀಲರು ತಿಳಿಸಿದ್ದರು. |