ಪೇಯಿಂಗ್ ಗೆಸ್ಟ್ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಸಾಫ್ಟ್ವೇರ್ ಪದವೀಧರೆ ಕೊನೆಗೂ ಹಳೆ ವಿಮಾನ ನಿಲ್ದಾಣ ಪೊಲೀಸರಿಗೆ ಸೆರೆಸಿಕ್ಕಿರುವ ಘಟನೆ ವರದಿಯಾಗಿದೆ.
ಈಕೆ ಹೇಳೋಕೆ ಮಾತ್ರ ಸಾಫ್ಟ್ವೇರ್ ಪದವೀಧರೆ ಆದರೆ ಮಾಡೋ ಕೆಲಸ ಮಾತ್ರ ಕಳ್ಳತನ!. ಕಳೆದ 18 ತಿಂಗಳಿನಿಂದ ಈಕೆ 28 ಪಿಜಿಗಳಲ್ಲಿ ವಾಸಿಸಿದ್ದಾಳೆ. ಇವಳು ಕದ್ದ ಹಣದ ಮೊತ್ತ ಒಟ್ಟು 9 ಲಕ್ಷ ರೂಪಾಯಿ.
ತ್ರಿಪುರ ಜಿಲ್ಲೆಯ ಅಮನಸಮುದ್ರಮ್ ಮೂಲದ ದೇವಿ ಮಹಾಲಕ್ಷ್ಮೀ ಕೆಲಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಳು. ಕೆಲಸ ಸಿಗದ ಕಾರಣ ಕಳ್ಳತನಕ್ಕೆ ಕೈ ಹಾಕಿದ್ದಾಗಿ ಒಪ್ಪಿಕೊಂಡಿದ್ದಾಳೆ. ಕೊಠಡಿಯಲ್ಲಿ ಸಹಪಾಠಿಗಳೊಂದಿಗೆ ಸ್ನೇಹ ಬೆಳೆಸಿ ಅವರಿಲ್ಲದ ಸಮಯ ನೋಡಿಕೊಂಡು ಹಣ ಹಾಗೂ ಇತರ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗುವುದು ಈಕೆಯ ಕೆಲಸ.
ಪೇಯಿಂಗ್ ಗೆಸ್ಟ್ಗಳಲ್ಲಿನ ಸಹಪಾಠಿಗಳ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ಗಳನ್ನು ಕಳವು ಮಾಡಿ ಅದನ್ನು ಐಷಾರಾಮಿ ವಸ್ತುಗಳನ್ನು ಕೊಳ್ಳುವ ವೇಳೆ ಬಳಸುತ್ತಿದ್ದಳು. ಆದರೆ ಅವಳ ಕಳ್ಳತನದ ಬಗ್ಗೆ ಯಾರಿಗೂ ಅರಿವಿರಲಿಲ್ಲ.
ವಿಮಾನ ನಿಲ್ದಾಣ, ಎಚ್ಎಎಲ್, ಕೆ.ಆರ್.ಪುರ, ಬೈಯಪ್ಪನ ಹಳ್ಳಿ, ಜೀವನ್ಭೀಮಾನಗರ, ಇಂದಿರಾನಗರ, ಕೋರಮಂಗಲ, ಹಲಸೂರು, ಮಡಿವಾಳ, ಮೈಕೋ ಲೇಔಟ್, ತಿಲಕ ನಗರ, ಜಯನಗರ ಜೆ.ಪಿ.ನಗರ, ರಾಮಮೂರ್ತಿನಗರ ಹೀಗೆ ಇವಳು ಕಳವು ಮಾಡದ ಏರಿಯಾಗಳಿಲ್ಲ. ಈ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿರುವ 28 ಪ್ರಕರಣಗಳಲ್ಲಿ ಈಕೆ ಭಾಗಿಯಾಗಿದ್ದಾಳೆ. ಅಷ್ಟೇ ಅಲ್ಲ ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. |