ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಲು ತಾವು ಅಡ್ಡಗಾಲು ಹಾಕುತ್ತಿರುವ ವರದಿಗಳನ್ನು ತಳ್ಳಿಹಾಕಿರುವ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರದಲ್ಲಿ ಯಾರನ್ನು ಸಚಿವರನ್ನಾಗಿಸಬೇಕು ಎನ್ನುವ ಪರಮಾಧಿಕಾರ ಪ್ರಧಾನಿಗಳಿಗೆ ಸೇರಿದ್ದು, ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಡ್ಡಗಾಲು ಹಾಕಲು ನಾನ್ಯಾರು ಎಂದು ಪ್ರಶ್ನಿಸಿದ ಅವರು ಯಾರನ್ನು ಸಚಿವರನ್ನಾಗಿಸಿದರೆ ಒಳ್ಳೆಯದು, ಕೆಟ್ಟದ್ದು ಎಂಬುದು ಕಾಂಗ್ರೆಸ್ ಹಾಗೂ ಯುಪಿಎ ಅಧ್ಯಕ್ಷ ಸೋನಿಯಗಾಂಧಿ ಅವರಿಗೆ ಗೊತ್ತಿದೆ ಎಂದು ಹೇಳಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ವ್ಯವಸ್ಥಿತ ಪ್ರಚಾರದ ಕೊರತೆಯೇ ಕಾರಣ. ಸೋಲಿನ ಬಗ್ಗೆ ನಾಯಕರುಗಳು ಕುರಿತು ಚರ್ಚಿಸಿ ಆಗಿರುವ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ ಎಂದರು.
ಲೋಕಸಭಾ ಚುನಾವಣೆಯ ಸೋಲಿಗೆ ವೈಯಕ್ತಿಕವಾಗಿ ಯಾರೊಬ್ಬರನ್ನು ಹೊಣೆ ಮಾಡುವುದು ಸರಿಯಲ್ಲ. ಇದು ಸಾಮೂಹಿಕ ಹೊಣೆಗಾರಿಕೆ ಎಂದ ಅವರು, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದೆ ಸೋಲಿಗೆ ಕಾರಣ ಎಂದು ಅವರು ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. |