ಗುರುಪಾದಪ್ಪ ನಾಗಮಾರಪಳ್ಳಿ ಅವರು ಬಿಜೆಪಿ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ತೆರವುಗೊಂಡ ಬೀದರ್ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಪುತ್ರ ಸೂರ್ಯಕಾಂತ ನಾಗಮಾಪಳ್ಳಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಉಪಚುನಾವಣೆಯ ಮತಎಣಿಕೆಯಲ್ಲಿ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಮರು ಮತದಾನ ಇಲ್ಲವೇ ಮರು ಎಣಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಚುನಾವಣಾಧಿಕಾರಿ, ಜಿಲ್ಲಾಧಿಕಾರಿಗಳು ಸೇರಿಕೊಂಡು ಮತಎಣಿಕೆಯಲ್ಲಿ ಮೋಸ ಎಸಗಿದ್ದಾರೆ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಆರೋಪಿಸಿದರು.
ಮತಎಣಿಕೆ ವೇಳೆ ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ಅದಲು-ಬದಲು ಮಾಡಲಾಗಿದೆ. ಲೋಕಸಭಾ ಕ್ಷೇತ್ರದ ಮತಯಂತ್ರಗಳ ಮತಗಳನ್ನು ವಿಧಾನಸಭಾ ಕ್ಷೇತ್ರಕ್ಕೆ ಎಣಿಕೆ ಮಾಡಲಾಗಿದೆ. ಈ ರೀತಿ ಲೋಕಸಭಾ ಕ್ಷೇತ್ರದ ಹದಿನೇಳು ಮತಯಂತ್ರಗಳ ಮತಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಪ್ರಮಾದವನ್ನು ಚುನಾವಣಾ ಅಧಿಕಾರಿಗಳೇ ಲಿಖಿತವಾಗಿ ಬರೆದುಕೊಟ್ಟಿದ್ದಾರೆ ಎಂದರು.
ಅಲ್ಲದೇ ಮತಎಣಿಕೆಯಲ್ಲಿ ಅವ್ಯವಹಾರ ಆಗದೆ ಎಂದು ಸ್ಪರ್ಧೆಯಲ್ಲಿದ್ದ ಇತರೆ ಏಳು ಮಂದಿ ಅಭ್ಯರ್ಥಿಗಳು ಕೂಡ ಆರೋಪಿಸಿರುವುದಾಗಿ ತಿಳಿಸಿದರು. ಮತಎಣಿಕೆಯ ದಿನವೇ ಈ ಪ್ರಮಾದವನ್ನು ಚುನಾವಣಾ ಆಯುಕ್ತರ ಗಮನಕ್ಕೆ ತರಲಾಗಿತ್ತು. ಫಲಿತಾಂಶ ತಡೆಹಿಡಿಯುವಂತೆ ಕೋರಲಾಗಿತ್ತು. ಆದರೂ ಫಲಿತಾಂಶ ಘೋಷಿಸಲಾಗಿತ್ತು. ಈ ಬಗ್ಗೆ ಚುನಾವಣಾ ಅಧಿಕಾರಿಗಳ ಕ್ರಮವನ್ನು ರಾಜ್ಯ ಹೈಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಹೇಳಿದರು.
|