ವಿಧಾನಪರಿಷತ್ತಿನ ಉಪಸಭಾಪತಿ ಪುಟ್ಟಣ್ಣ ತಾವು ಕನ್ನಡಿಗ ಎಂಬುದನ್ನೇ ಮರೆತು ಆಂಗ್ಲ ಮಾಧ್ಯಮ ಶಾಲೆಗಳ ಮಾಲೀಕರ ಪರ ವಕಾಲತ್ತು ವಹಿಸಿದ್ದಾರೆ. ಅವರ ಕನ್ನಡ ವಿರೋಧಿ ನಿಲುವನ್ನು ಖಂಡಿಸುತ್ತೇನೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.
ಭಾಷಾ ಮಾಧ್ಯಮದ ವಿಚಾರ ಕೋರ್ಟ್ ಮುಂದೆ ಇರುವಾಗಲೇ ಪುಟ್ಟಣ್ಣ, ಕಾನ್ವೆಂಟ್ ಶಾಲೆಗಳ ಪರ ಮಾತನಾಡಿ ತಮ್ಮ ಆಂಗ್ಲ ವ್ಯಾಮೋಹ ಪ್ರದರ್ಶಿಸಿದ್ದಾರೆ ಎಂದು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ದೂರಿದರು.
ಪರಿಷತ್ತಿನ ಉಪಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಪುಟ್ಟಣ್ಣ ಕನ್ನಡ ವಿರೋಧಿ ನೀತಿ ಅನುಸರಿಸಲಿ ಎಂದು ಲೇವಡಿ ಮಾಡಿದ ಅವರು, ಕನ್ನಡ ವಿರೋಧಿ ನೀತಿ ಅನುಸರಿಸುತ್ತಿರುವ ಬಗ್ಗೆ ಪುಟ್ಟಣ್ಣ ಅವರನ್ನು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪ್ರಶ್ನಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಭಾಷಾ ಮಾಧ್ಯಮದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತೆಗೆದುಕೊಂಡಿರುವ ದಿಟ್ಟ ನಿರ್ಧಾರಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದಿರುವ ಚಂದ್ರು, ಮುಂದೆಯೂ ಸಹ ಯಾವುದೇ ಒತ್ತಡಕ್ಕೂ ಮಣಿಯದೆ ಈಗ ತೆಗೆದುಕೊಂಡಿರುವ ದಿಟ್ಟ ನಿರ್ಧಾರದಂತೆಯೇ ನಡೆದುಕೊಳ್ಳಬೇಕು ಎಂದು ಹೇಳಿದರು. |