ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನಪಡೆಯಲು ತೆರೆಮರೆಯಲ್ಲಿ ಸಾಕಷ್ಟು ಕಸರತ್ತು ನಡೆಯುತ್ತಿದ್ದು, ರಾಜ್ಯದ ನಾಯಕರು ನಡೆಸುತ್ತಿರುವ ಪೈಪೋಟಿಯಲ್ಲಿ ಆಸ್ಕರ್ ಫರ್ನಾಂಡಿಸ್, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್.ಮುನಿಯಪ್ಪ ಅವರು ಯಶ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.ಅಲ್ಲದೇ ಇವರ ಜತೆ ಮಾಜಿ ಮುಖ್ಯಮಂತ್ರಿಗಳಾದ ಎಂ.ವೀರಪ್ಪ ಮೊಯಿಲಿ, ಎಸ್.ಎಂ.ಕೃಷ್ಣ ಹೆಸರು ಕೇಳಿಬರುತ್ತಿದೆ. ಆದರೆ ಮೊಯಿಲಿ ಅವರಿಗೆ ಲೋಕಸಭಾ ಅಧ್ಯಕ್ಷರ ಸ್ಥಾನ ಇಲ್ಲವೇ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನವನ್ನೂ ನಿರ್ವಹಿಸಲು ಸಾಧ್ಯ ಇರುವುದರಿಂದ ಆ ಸ್ಥಾನವನ್ನು ನೀಡಿ ತೃಪ್ತಿಪಡಿಸಬಹುದೆಂಬ ಲೆಕ್ಕಚಾರ ನಡೆಯುತ್ತಿದೆ. ಸಂಪುಟ ದರ್ಜೆಯ ಸಚಿವ ಸ್ಥಾನಕ್ಕೆ ಆಸ್ಕರ್ ಮತ್ತು ಖರ್ಗೆ ಹೆಸರು ಅಂತಿಮಗೊಂಡಿದ್ದು, ಕೊನೆಗಳಿಗೆಯಲ್ಲಿ ಕೆ.ಎಚ್.ಮುನಿಯಪ್ಪ ಹೆಸರೂ ಸೇರಿಕೊಂಡಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಆಸ್ಕರ್ ಅವರನ್ನು ಕೈಬಿಡುವಂತಿಲ್ಲ, ರಾಜ್ಯದಲ್ಲಿ ವಿರೋಧ ಪಕ್ಷ ಸ್ಥಾನ ತೊರೆದಿರುವ ಸ್ಥಾನಕ್ಕೆ ಪ್ರತಿಯಾಗಿ ಖರ್ಗೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಗಿದೆ.ಹಿಂದಿನ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ ದಕ್ಷಿಣ ಭಾರತದಿಂದ ಆಯ್ಕೆಯಾಗಿ ಬಂದ ದಲಿತರಲ್ಲಿನ ಎಡಪಂಗಡಕ್ಕೆ ಸೇರಿದ ಏಕೈಕ ನಾಯಕ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. |