ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಿಜಾಪುರದ ಮಾಜಿ ಸಂಸದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೇಂದ್ರ ಬಿಜೆಪಿ ವರಿಷ್ಠರ ಆದೇಶದ ಮೇರೆಗೆ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಶುಕ್ರವಾರ ತಿಳಿಸಿದ್ದಾರೆ.
2004ರಲ್ಲಿ ಬಿಜಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಯತ್ನಾಳ್ ಆಯ್ಕೆಯಾಗಿದ್ದರು. ಬಳಿಕ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಾ ಗದ್ದುಗೆಗೆ ಏರಿ, ಆಪರೇಶನ್ ಕಮಲ ಆರಂಭಿಸಿದಾಗ ಅದನ್ನು ಮೊದಲು ವಿರೋಧಿಸಿದವರು ಯತ್ನಾಳ್.
ಅಲ್ಲದೇ ಬಹಿರಂಗವಾಗಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ವಿರುದ್ಧವೂ ಹರಿಹಾಯ್ದಿದ್ದರು. ಬಿಜೆಪಿ ಆಪರೇಶನ್ ಕಮಲ ತಂತ್ರದಿಂದಾಗಿ ಪಕ್ಷದಲ್ಲಿನ ಹಿರಿಯ ಮತ್ತು ಮೂಲ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ ಎಂದು ಆಪಾದಿಸಿದ್ದರು.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಯತ್ನಾಳ್, ಉರಿಮಜಲು ರಾಮಭಟ್, ಶಕುಂತಲಾ ಶೆಟ್ಟಿ ಸೇರಿದಂತೆ ಹಲವು ಮಂದಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದಾಗಿ ಬಿಜೆಪಿ ದೂರಿದೆ. ಆ ನಿಟ್ಟಿನಲ್ಲಿ ಬಸನಗೌಡ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ಸಮಿತಿ ಕೇಂದ್ರ ಮಂಡಳಿಗೆ ಲಿಖಿತ ದೂರು ನೀಡಿತ್ತು.
ರಾಜ್ಯ ಸಮಿತಿಯ ದೂರಿನ ಅನ್ವಯ , ಯತ್ನಾಳ್ ಅವರನ್ನು ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಛಾಟಿಸುವಂತೆ ಬಿಜೆಪಿ ಸಂಸದೀಯ ಮಂಡಳಿ ಈ ನಿರ್ಧಾರ ಕೈಗೊಂಡಿರುವುದಾಗಿ ಸದಾನಂದ ಗೌಡ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. |