ದುಬಾರಿ ಬೆಲೆಯ ಕರಕುಶಲ ವಸ್ತುಗಳು ರೇಶ್ಮೆ ಸೀರೆಗಳು ಸೇರಿ ಅಲಂಕಾರಿಕ ವಸ್ತುಗಳೇ ತುಂಬಿದ್ದ ಎಂ.ಜಿ. ರಸ್ತೆಯ ಕಾವೇರಿ ಭವನ ಇಂಡಸ್ಟ್ರೀಸ್ನ ಎಕ್ಸ್ಬಿಟ್ಸ್ಗೆ ಶುಕ್ರವಾರ ತಗುಲಿದ ಆಕಸ್ಮಿಕ ಬೆಂಕಿಯಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.
ಟ್ರಿನಿಟಿ ಕಾಂಪ್ಲೆಕ್ಸ್ನಲ್ಲಿರುವ ಕಾವೇರಿ ಇಂಡಸ್ಟ್ರೀಸ್ ಎಕ್ಸ್ಬಿಟ್ಸ್ನಲ್ಲಿ ನಸುಕಿನ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿರುವುದಾಗಿ ಅಗ್ನಿ ಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಪ ಪ್ರಮಾಣದ ಬೆಂಕಿ ಸ್ವಲ್ಪ ಹೊತ್ತಿನಲ್ಲೇ ಇಡೀ ಮಳಿಗೆ ಆವರಿಸಿದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಸತತ ಎರಡು ಗಂಟೆಗಳ ಕಾಲ ಶ್ರಮಿಸಿ ಬೆಂಕಿ ನಂದಿಸಿವೆ.
ಬೆಂಕಿಯಲ್ಲಿ ಕೋಟ್ಯಂತರ ರೂಪಾಯಿ ಬೆಲೆಯ ರೇಷ್ಮೆ ಸೀರೆ, ಕರಕುಶಲ ವಸ್ತು, ಅಲಂಕಾರಿಕ ವಸ್ತುಗಳು ಸುಟ್ಟು ಭಸ್ಮವಾಗಿವೆ. ಕೆಲವು ದಿನಗಳ ಹಿಂದಷ್ಟೇ ಕಾವೇರಿ ಕರಕುಶಲ ವಸ್ತುಗಳ ಎಂಜಿ ರಸ್ತೆಯ ಮಳಿಗೆಗೆ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿತ್ತು. |