ತವರು ಮನೆಯಿಂದ ಒಂದು ಕೋಟಿ ತರಬೇಕು ಹಾಗೂ ನಿವೇಶನವೊಂದನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸಿದ ಪೀಡಕ ಗಂಡನೊಬ್ಬ ಇದೀಗ ನಗರದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಅತಿಥಿಯಾದ ಘಟನೆ ನಡೆದಿದೆ.
ತನ್ನ ಪತ್ನಿಯನ್ನು ಟಾಯ್ಲೆಟ್ವೊಂದರಲ್ಲಿ ಕೂಡಿ ಹಾಕಿ, ನಂತರ ಆಕೆಯ ಮೈಮೇಲಿದ್ದ ಚಿನ್ನಾಭರಣ ದೋಚಿರುವ ಪತಿ ಲೋಕೇಶನನ್ನು ಹಲಸೂರು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಬೋವಿಪಾಳ್ಯದಲ್ಲಿರುವ ಮಹಾಲಕ್ಷ್ಮಿ ಪುರಂ ಸಮೀಪದ ನಿವಾಸಿ ಲೋಕೇಶ್ ಎಂಬಾತ ಕಳೆದ ಮೂರು ವರ್ಷಗಳ ಹಿಂದೆ ಶಿಲ್ಪಾ ಎಂಬುವರನ್ನು ಮದುವೆಯಾಗಿದ್ದ. ಮದುವೆ ಸಂದರ್ಭದಲ್ಲಿ ಆತನಿಗೆ ಒಂದು ಲಕ್ಷ ನಗದು, 310ಗ್ರಾಂ ಆಭರಣ ನೀಡಲಾಗಿತ್ತು. ಇತ್ತೀಚೆಗೆ ಪತ್ನಿಗೆ ಒಂದು ಕೋಟಿ ರೂ.ಹಣ ಹಾಗೂ ನಿನ್ನ ಹೆಸರಿನಲ್ಲಿರುವ ನಿವೇಶನವನ್ನು ತನ್ನ ಹೆಸರಿಗೆ ಬರೆದುಕೊಡಬೇಕೆಂದು ಲೋಕೇಶ್ ಹಿಂಸೆ ನೀಡುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಇತ್ತೀಚೆಗೆ ಪತಿ ಲೋಕೇಶ್, ಮಾವ ಹನುಮಂತಯ್ಯ, ಅತ್ತೆ ಹುಚ್ಚಮ್ಮ, ನಾದಿನಿ ವರಲಕ್ಷ್ಮಿ ಹಾಗೂ ಮೈದುನರಾದ ರಮೇಶ್, ನಾಗರಾಜ ಸೇರಿ ಪತ್ನಿಯನ್ನು ಟಾಯ್ಲೆಟ್ನಲ್ಲಿ ಕೂಡಿ ಹಾಕಿ ಆಕೆ ಮೈಮೇಲಿದ್ದ ಚಿನ್ನಾಭರಣ ಬಿಚ್ಚಿಕೊಂಡು ನಂತರ ಆಕೆಯನ್ನು ತವರು ಮನೆಗೆ ಬಿಟ್ಟು ಹೋಗಿದ್ದರು. ಈ ಕುರಿತು ಶಿಲ್ಪಾ ದೂರು ನೀಡಿದ್ದು, ಪತಿ ಈಗ ಪೊಲೀಸರ ಆತಿಥ್ಯದಲ್ಲಿದ್ದಾನೆ! |