ನಗರದ ಹೊರವಲಯದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಮುಸ್ಲಿಂ ಯುವಕರಿಬ್ಬರ ಮೇಲೆ ಹಲ್ಲೆ ನಡೆದಿದೆ. ಹಲ್ಲೆಯಲ್ಲಿ ಗಾಯಗೊಂಡಿರುವ ಯುವಕರಿಬ್ಬರೂ, ಹಿಂದೂ ಸಂಘಟನೆಗಳಿಗೆ ಸೇರಿದ ಗುಂಪು ತಮ್ಮ ಮೇಲೆ ಹಲ್ಲೆ ನಡೆಸಿತು ಎಂದು ಆರೋಪಿಸಿದ್ದರು.
ಮಾರ್ನಮಿಕಟ್ಟೆಯ ನಿವಾಸಿ ಮೊಹಮ್ಮದ್ ಅಶ್ರಫ್(27) ಹಾಗೂ ಅಡ್ಯಾರ್ ಪದವಿನ ಫಾರೂಕ್(22) ಹಲ್ಲೆಯಲ್ಲಿ ಗಾಯಗೊಂಡಿದ್ದಾರೆ.
ಗುರುವಾರ ರಾತ್ರಿ 11.30ರ ಸುಮಾರಿಗೆ 10-12ಮಂದಿ ಗುಂಪು ಮರಕಾಯುಧಗಳಿಂದ ಅಶ್ರಫ್ ಮೇಲೆ ಹಲ್ಲೆ ನಡೆಸಿದ್ದು, ಅವರ ಮುಖ, ಕತ್ತು ಹಾಗೂ ಬೆನ್ನಿನ ಮೇಲೆ ಗಾಯಗಳಾಗಿವೆ. ಅವರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಅಶ್ರಫ್ ಮೇಲಿನ ಹಲ್ಲೆ ಘಟನೆಗೆ ಸಂಬಂಧಿಸಿ ನಗರದ ಯಾವುದೇ ಠಾಣೆಯಲ್ಲಿ ದೂರು ದಾಖಲಾಗಿಲ್ಲ.
ಮತ್ತೊಂದು ಘಟನೆಯಲ್ಲಿ ಅಡ್ಯಾರ್ ಪದವು ನಿವಾಸಿ ರಿಕ್ಷಾ ಚಾಲಕ ಫಾರೂಕ್ ಮೇಲೆ ನಾಲ್ವರ ತಂಡ ಹಲ್ಲೆ ನಡೆಸಿದೆ. ಘಟನೆ ಸಂಬಂಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಣ್ಣು ಅಲಿಯಾಸ್ ಪ್ರದೀಪ್(25)ಎಂಬಾತನನ್ನು ಬಂಧಿಸಿದ್ದಾರೆ.
ಹಾಲು ತರಲು ಮನೆ ಸಮೀಪದ ಅಂಗಡಿಗೆ ಹೋಗುತ್ತಿದ್ದಾಗ ಹಿಂದಿನಿಂದ ಆಗಮಿಸಿದ ಅಣ್ಣು ಎಂಬಾತನಿದ್ದ ಗುಂಪು ಏಕಾಏಕಿ ಅವರ ಮೇಲೆ ಆಯುಧದಿಂದ ಹಲ್ಲೆ ನಡೆಸಿ ಪರಾರಿಯಾಗಿತ್ತು ಎಂದು ಫಾರೂಕ್ ದೂರು ನೀಡಿದ್ದಾರೆ. |