ಗ್ರಾಮೀಣಾಭಿವೃದ್ಧಿ ದೊಡ್ಡ ಇಲಾಖೆ ಕಳೆದ ಕೆಲವು ತಿಂಗಳಿನಿಂದ ಸರಿಯಾಗಿ ಗಮನ ಕೊಡಲು ಸಾಧ್ಯವಾಗಿಲ್ಲ, ಆ ನಿಟ್ಟಿನಲ್ಲಿ ಉಸ್ತುವಾರಿ ಸಚಿವಗಿರಿಯಿಂದ ನನಗೆ ಮುಕ್ತಿ ನೀಡಿ'ಅಂತ ಸಚಿವೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬಹಿರಂಗವಾಗಿ ಮಾಡಿಕೊಂಡ ಮನವಿ ಇದು.ಸಂದರ್ಭ: ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದ ಗದ್ದುಗೆಗೆ ಏರಿ ಒಂದು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಕಾಸ ಸಂಕಲ್ಪ ಉತ್ಸವದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ಸಾಕಪ್ಪೋ ಸಾಕು...ನನ್ನ ಉಸ್ತುವಾರಿ ಸಚಿವ ಹುದ್ದೆಯಿಂದ ಬಿಡುಗಡೆಗೊಳಿಸಿ ಎಂದು ನೆರೆದಿದ್ದ ಸಾವಿರಾರು ಜನರ ಎದುರೇ ಮನವಿ ಮಾಡಿಕೊಳ್ಳುವ ಮೂಲಕ ಅಚ್ಚರಿಗೀಡುಮಾಡಿದರು.ಆದರೆ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಗ್ರಾಮೀಣಾಭಿವೃದ್ಧಿ ಇಲಾಖೆ ದೊಡ್ಡದು ಅಂತ ತಿಳಿದಿದೆ, ಆದರೂ ಶೋಭಾ ಕರಂದ್ಲಾಜೆಯವರು ಬೇರೆ, ಬೇರೆ ಕಾರಣಗಳಿಂದ ಆ ಮಾತನ್ನು ಹೇಳಿರಬಹುದು. ಏನೇ ಇರಲಿ ನೀವೇ ಮುತುವರ್ಜಿ ವಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಹುದ್ದೆಯನ್ನೂ ನಿರ್ವಹಿಸಬೇಕು ಎಂದು ಶೋಭಾ ಅವರ ಮನವಿಯನ್ನು ನಯವಾಗಿ ತಳ್ಳಿಹಾಕಿದರು.ಎಲ್ಲಾ ಅಡ್ಡಿ-ಆತಂಕಗಳ ನಡುವೆ ನಾವು ಅಭಿವೃದ್ಧಿಗೆ ಮೊದಲ ಆದ್ಯತೆ ಕೊಟ್ಟು ಕೆಲಸ ಮಾಡಬೇಕಾಗಿದೆ. ನೀವು ಈಗಾಗಲೇ ಮೈಸೂರು ದಸರಾದಂತಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದ್ದೀರಿ. ಅದೇ ರೀತಿ ಇನ್ನು ಮುಂದೆಯೂ ನೀವು ಕಾರ್ಯನಿರ್ವಹಿಸಿ, ನಂತರದ ದಿನಗಳಲ್ಲಿ ಏನಾಗುತ್ತೆ ಅಂತ ನೋಡುವಾ ಎಂದು ಮುಖ್ಯಮಂತ್ರಿಗಳು ಹೇಳಿದರು. |