ಬಾಲಕ ಅಭಿಷೇಕ್ ಮೋರಿಯಲ್ಲಿ ಕೊಚ್ಚಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಗ್ಗೆ ಮಾನಹಾನಿಕಾರಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ಅವರು ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.ಖಾಸಗಿ ಟಿವಿ ವಾಹಿನಿಯಲ್ಲಿ ಮಾತನಾಡಿದ ಲೋಕಾಯುಕ್ತ ನ್ಯಾ.ಹೆಗ್ಡೆಯವರು ತನ್ನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ದೂರಿ ನಗರದ 5ನೇ ಎಸಿಎಂಎಂ ಕೋರ್ಟ್ನಲ್ಲಿ ಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ಅವರು ಶನಿವಾರ ಮಾನನಷ್ಟ ದಾವೆ ದಾಖಲಿಸಿದ್ದಾರೆ.ಕಳೆದ ಭಾನುವಾರ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಲಿಂಗರಾಜಪುರದ ಬಾಲಕ ಅಭಿಷೇಕ್ ಮೋರಿ ನೀರಿನಲ್ಲಿ ಕೊಚ್ಚಿ ಹೋಗಿದ್ದ, ಈ ಸಂದರ್ಭದಲ್ಲಿ ಬಿಬಿಎಂಪಿ, ಅಗ್ನಿಶಾಮಕ ದಳ ಬಾಲಕನ ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದರೂ ಕೂಡ ಈವರೆಗೂ ಬಾಲಕನ ಮೃತದೇಹ ಪತ್ತೆಯಾಗಿಲ್ಲವಾಗಿತ್ತು.ಘಟನೆಯ ನಂತರ ಸ್ವ ಇಚ್ಛೆಯಿಂದ ಬಾಲಕ ಅಭಿಷೇಕ್ ಕುಟುಂಬಕ್ಕೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಬಳಿಕ ಖಾಸಗಿ ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ, ಬಿಬಿಎಂಪಿ ಆಯುಕ್ತ ಸುಬ್ರಹ್ಮಣ್ಯ ಅವರು ಮೃತಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವಷ್ಟು ಸೌಜನ್ಯ ಇಲ್ಲ, ಇದು ಅಮಾನವೀಯ ವರ್ತನೆ. ಅಲ್ಲದೇ ಜನರ ಕಷ್ಟಗಳಿಗೆ ಸ್ಪಂದಿಸಲು ಆಗದಿದ್ದ ಮೇಲೆ ಬಿಬಿಎಂಪಿ ಯಾಕೆ ಎಂದು ಹರಿಹಾಯ್ದಿದ್ದರು.ನ್ಯಾ.ಸಂತೋಷ್ ಹೆಗ್ಡೆಯವರು ಬಹಿರಂಗವಾಗಿ ಆರೋಪ ಮಾಡುವ ಮೂಲಕ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಬಂದಂತಾಗಿದೆ. ನಾನು ಕಳೆದ ಕೆಲವು ವರ್ಷಗಳಿಂದ ಬಿಬಿಎಂಪಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ಆ ಕಾರಣಕ್ಕಾಗಿ ತಾನು ಲೋಕಾಯುಕ್ತ ನ್ಯಾಯಮೂರ್ತಿಗಳ ವಿರುದ್ಧ ದಾವೆ ಹೂಡಿರುವುದಾಗಿ ಆಯುಕ್ತರು ಸಮರ್ಥನೆ ನೀಡಿದ್ದಾರೆ. |