'ಕಾಲೆಳೆಯುವವರು ಇದ್ದೇ ಇರುತ್ತಾರೆ. ಅದಕ್ಕೆಲ್ಲ ಅಂಜುವುದಿಲ್ಲ. ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ. ಆದರೆ ಪ್ರಗತಿ ಕಾರ್ಯಕ್ಕೆ ಹಿನ್ನೆಡೆ ಉಂಟು ಮಾಡುವ ಅಧಿಕಾರಿಗಳನ್ನು ಮಾತ್ರ ಕ್ಷಮಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನ ನಂತರ ನಗರದಲ್ಲಿ ಹಮ್ಮಿಕೊಂಡಿದ್ದ ಮೈಸೂರು ವಿಭಾಗ ಮಟ್ಟದ ವಿಕಾಸ ಸಂಕಲ್ಪ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸದಾ ಕಾಲೆಳೆಯುವವರು ಇದ್ದೇ ಇರುತ್ತಾರೆ. ಇಂತಹ ವಿಚಾರಗಳಿಗೆ ಗಮನ ಕೊಡದೆ ದೇಶದಲ್ಲೇ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಸಂಕಲ್ಪ ತೊಡಲಾಗಿದೆ. ಅಧಿಕಾರ ಶಾಶ್ವತವಲ್ಲ. ಜನರಿಗಾಗಿ ಪ್ರಾಣ ಕೊಡಲು ಸಿದ್ದನಿದ್ದೇನೆ. ಅಧಿಕಾರಿಗಳ ಕಾರ್ಯವೈಖರಿಯನ್ನು ಒಂದು ವರ್ಷ ಕಾಲ ನೋಡಿಯಾಗಿದೆ. ಇನ್ನು ಮುಂದೆಯೂ ಅಭಿವೃದ್ಧಿಗೆ ಹಿನ್ನೆಡೆ ಮಾಡಿದರೆ ಕ್ಷಮಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡವರಿಗೆ ನಿರೀಕ್ಷಿತ ಮಟ್ಟದಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಆಗಲಿಲ್ಲ. ಗ್ರಾಮ ಪಂಚಾಯ್ತಿಗಳು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಿಕೊಡಲು ಆರೇಳು ತಿಂಗಳು ವಿಳಂಬ ಮಾಡಿವೆ. ಪಟ್ಟಿ ನೀಡುವುದು ಇನ್ನೂ ತಡವಾದರೆ, ಚುನಾಯಿತ ಪ್ರತಿನಿಧಿಗಳು ಆಸಕ್ತಿ ತೋರದಿದ್ದರೆ ಅಧಿಕಾರಿಗಳೇ ಪಟ್ಟಿ ಕಳುಹಿಸಿಕೊಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. |