ಪಕ್ಷದ ಯಾರೇ ಆಗಲಿ ಈಡೇರಿಸಲು ಸಾಧ್ಯವಿಲ್ಲದಂಥ ಬೇಡಿಕೆಗಳನ್ನು ಮುಂದಿಟ್ಟು ಬ್ಲಾಕ್ಮೇಲ್ ತಂತ್ರ ಅನುಸರಿಸಿದರೆ ಅದಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿಲ್ಲ ಎಂಬ ತೀಕ್ಷ್ಣ ಸಂದೇಶವನ್ನು ಸಂಘ ಪರಿವಾರದಿಂದ ಮುಖ್ಯಮಂತ್ರಿ ಅವರಿಗೆ ಕಟು ಎಚ್ಚರಿಕೆ ರವಾನೆಯಾಗಿದೆ.
ಸರ್ಕಾರವನ್ನಾಗಲಿ ಅಥವಾ ಪಕ್ಷವನ್ನಾಗಲಿ ಹೈಜಾಕ್ ಮಾಡಲು ಅವಕಾಶ ನೀಡಬಾರದು. ಅಂಥ ಪ್ರಯತ್ನ ಮುಂದುವರಿದರೆ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಹಿಂಜರಿಯಬಾರದು ಎಂದು ಸಂಘ ಪರಿವಾರದ ಮುಖಂಡರು ಎಚ್ಚರಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಅಲ್ಲದೆ, ಈ ಬಗ್ಗೆ ಯಡಿಯೂರಪ್ಪನವರು ತಮ್ಮಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಸಲಹೆ ನೀಡಲಾಗಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ದೃಢವಾದ ಹೆಜ್ಜೆ ಇರಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಪರೋಕ್ಷವಾಗಿ ತಮ್ಮ ವಿರುದ್ಧ ಸಮರ ಸಾರಿರುವ ಬಳ್ಳಾರಿ ಗಣಿ ಧಣಿಗಳ ಜತೆ ಮಾತುಕತೆ ನಡೆಸುವ ಸಾಧ್ಯತೆಯನ್ನು ಮುಖ್ಯಮಂತ್ರಿಗಳ ಆಪ್ತರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದುವರೆಗೆ ಬಳ್ಳಾರಿ ರೆಡ್ಡಿ ಸಹೋದರರು ಮುಖ್ಯಮಂತ್ರಿಗಳ ಜೊತೆ ನೇರವಾಗಿ ಮಾತುಕತೆ ನಡೆಸಿಲ್ಲ. ಅಲ್ಲದೆ, ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಭಿನ್ನಮತವನ್ನು ತೋರ್ಪಡಿಸಿಕೊಂಡಿಲ್ಲ. ಜತೆಗೆ ಸ್ವತಃ ಸಂದೇಶ ರವಾನಿಸಿದರೂ ಮಾತುಕತೆಗೆ ಮುಂದೆ ಬಂದಿಲ್ಲ. ಹೀಗಾಗಿ ಮಾತುಕತೆಯ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಗಳ ಆಪ್ತರು ತಿಳಿಸಿದ್ದಾರೆ.
ಇದೇ ವೇಳೆ ನಮ್ಮ ಸ್ನೇಹಿತರಾಗಲಿ ನಾವಾಗಲಿ ಸರ್ಕಾರವನ್ನು ಅಭದ್ರಗೊಳಿಸಲು ಯತ್ನಿಸಿಲ್ಲ. ಸರ್ಕಾರ ಬಲಿಷ್ಟಗೊಳಿಸುತ್ತೇವೆಯೇ ಹೊರತು ಬೀಳಿಸುವುದು ನಮ್ಮ ಉದ್ದೇಶವಲ್ಲ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. |