ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇಂಧನ ಸಚಿವ ಈಶ್ವರಪ್ಪ ನಡುವಿನ ಭಿನ್ನಾಭಿಪ್ರಾಯ ತೆರೆಯಮರೆಯಲ್ಲಿ ಮುಂದುವರಿದಿರುವ ನಡುವೆಯೇ ಗಣಿಧಣಿಗಳ ನಡುವಿನ ಭಿನ್ನಮತ ಶಮನಕ್ಕೆ ಸಿಎಂ ಮಂಗಳವಾರ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಗಣಿಧಣಿಗಳು ಮತ್ತು ಮುಖ್ಯಮಂತ್ರಿಗಳ ನಡುವೆ ಎದ್ದಿರುವ ಭಿನ್ನಾಭಿಪ್ರಾಯವನ್ನು ದೂರ ಮಾಡುವ ನಿಟ್ಟಿನಲ್ಲಿ ಈ ಮಾತುಕತೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಆದರೆ ಮಾತುಕತೆಯ ವಿವರಗಳು ಮಾತ್ರ ಬಹಿರಂಗ ಪಡಿಸಲಾಗಿಲ್ಲ.
ಗುಪ್ತವಾಗಿ ನಡೆಸಿದ ಮಾತುಕತೆ ನಗರದ ಹೋಟೆಲ್ಲೊಂದರಲ್ಲಿ ನಡೆದಿದಿಯೋ ಅಥವಾ ಗಣ್ಯವ್ಯಕ್ತಿಯೊಬ್ಬರ ನಿವಾಸದಲ್ಲಿ ನಡೆದಿದಿಯೋ ಎಂಬುದು ಮಾತ್ರ ತಿಳಿದು ಬಂದಿಲ್ಲ. ಈ ಮಾತುಕತೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಜನಾರ್ಧನ ರೆಡ್ಡಿ, ಶ್ರೀರಾಮುಲು ಮತ್ತು ಕರುಣಾಕರ ರೆಡ್ಡಿ ಬಿಟ್ಟರೆ ಮತ್ಯಾರು ಉಪಸ್ಥಿತಿ ಇರಲಿಲ್ಲ. ಮುಖ್ಯಮಂತ್ರಿಗಳು ಮತ್ತು ಗಣಿಧಣಿಗಳು ತಮ್ಮ ಖಾಸಗಿ ಕಾರಿನಲ್ಲೇ ಮಾತುಕತೆಗೆ ಆಗಮಿಸಿದ್ದರು ಎಂದು ಬಲ್ಲ ಮೂಲಗಳು ತಿಳಿಸಿವೆ.
ಮಾತುಕತೆ ಮೂಲಕ ಕಳೆದ ಕೆಲ ದಿನಗಳಿಂದ ಮುಖ್ಯಮಂತ್ರಿ ಹಾಗೂ ಗಣಿಧಣಿಗಳ ನಡುವೆ ಉದ್ಭವಿಸಿದ್ದ ಭಿನ್ನಾಭಿಪ್ರಾಯ ಶಮನವಾಗುವ ಲಕ್ಷಣಗಳು ಕಾಣುತ್ತಿವೆ. |