ಕ್ಷುಲ್ಲಕ ಭಿನ್ನಾಭಿಪ್ರಾಯದಿಂದಾಗಿ ಕಾಲೇಜಿನ ಪ್ರೊಫೆಸರ್ರೊಬ್ಬರನ್ನು ಕಾಲೇಜಿನ ಒಳಗೆ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಬುಧವಾರ ಮೈಸೂರಿನ ಪ್ರತಿಷ್ಠಿತ ಶಾರದಾ ವಿಲಾಸ್ ಫಾರ್ಮಸಿ ಕಾಲೇಜಿನಲ್ಲಿ ನಡೆದಿದೆ.
ಶಾರದಾ ವಿಲಾಸ್ ಫಾರ್ಮಸಿ ಕಾಲೇಜಿನ ಪ್ರೊಫೆಸರ್ ಚಂದ್ರಲೇಖಾ ಎಂಬವರನ್ನು ಮ್ಯಾನೇಜರ್ ಪುಟ್ಟಣ್ಣ ಸ್ಟಾಫ್ ರೂಂನಲ್ಲಿಯೇ ಕತ್ತು ಕತ್ತರಿಸಿ ಕೊಲೆಗೈದಿದ್ದಾನೆ. ಪ್ರೊಫೆಸರ್ ಅವರ ಕತ್ತು ಕೊಯ್ದು ಹತ್ಯೆ ಮಾಡಿದ ನಂತರ ಆರೋಪಿ ಪುಟ್ಟಣ್ಣ ಪೊಲೀಸರಿಗೆ ಶರಣಾಗಿದ್ದಾನೆ.
ಎಂದಿನಂತೆ ಕಾಲೇಜಿನ ಮ್ಯಾನೇಜರ್ ಪುಟ್ಣಣ್ಣ ಇಂದು ಕೂಡ ಸ್ಟಾಫ್ ರೂಂನಲ್ಲಿ ಪ್ರೊಫೆಸರ್ ಚಂದ್ರಲೇಖಾ ಅವರೊಡನೆ ಮಾತಿನ ಚಕಮಕಿಗೆ ಇಳಿದಿದ್ದ, ಆ ಹೊತ್ತಿಗೆ ತಾಳ್ಮೆಗೆಟ್ಟು ಪ್ರೊಫೆಸರ್ ಅವರ ಕುತ್ತಿಗೆಯನ್ನು ಹರಿತ ಚೂರಿಯಲ್ಲಿ ಕತ್ತರಿಸಿ ಕೊಲೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾಲೇಜಿನ ಸ್ಟಾಫ್ ರೂಂನಲ್ಲೇ ಕೊಲೆ ನಡೆದ ಘಟನೆಯಿಂದಾಗಿ ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ದಿಗ್ಭ್ರಾಂತರಾಗಿದ್ದಾರೆ. ತನ್ನನ್ನು ಪದೇಪದೇ ಜಾತಿನಿಂದನೆ ಗುರಿಪಡಿಸುತ್ತಿದ್ದ ಚಂದ್ರಲೇಖಾ ಅವರನ್ನು ಹತ್ಯೆಗೈದಿರುವುದಾಗಿ ಆರೋಪಿ ತಿಳಿಸಿದ್ದಾನೆ. ಆದರೆ ಪ್ರೊಫೆಸರ್ ಅವರ ಕೊಲೆಗೆ ನಿಖರ ಕಾರಣ ಏನೆಂದು ತನಿಖೆ ನಂತರವಷ್ಟೇ ತಿಳಿಯಬಹುದು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿದ್ದಾರೆ. |