ರಾಜ್ಯ ರಾಜಕಾರಣದ ಬಿಜೆಪಿ ಪಕ್ಷದಲ್ಲಿ ಆಂತರಿಕವಾಗಿ ತಲೆಎತ್ತಿರುವ ಭಿನ್ನಮತ ಶಮನವಾಗುವ ಲಕ್ಷಣ ಕಾಣದಿರುವ ಹಿನ್ನೆಲೆಯಲ್ಲಿ ರಾಜ್ಯದ ಉಸ್ತುವಾರಿ ಹೊತ್ತಿರುವ ಪಕ್ಷದ ಹಿರಿಯ ಮುಖಂಡ ಅರುಣ್ ಜೇಟ್ಲಿ ಬುಧವಾರ ರಾತ್ರಿ ನಗರಕ್ಕೆ ಆಗಮಿಸಲಿದ್ದಾರೆಂದು ಮೂಲಗಳು ತಿಳಿಸಿವೆ.ಒಂದೆಡೆ ಗಣಿಧಣಿಗಳು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನಡುವಿನ ಸಂಧಾನ ಮಾತುಕತೆ ವಿಫಲವಾಗಿದ್ದು, ರೆಡ್ಡಿ ಸಹೋದರರು ತಮ್ಮ ಬೇಡಿಕೆ ಈಡೇರಿಸುವಂತೆ ಜೂ 13ರವರೆಗೆ ಅಂತಿ ಗಡುವು ನೀಡಿದ್ದಾರೆ. ಮತ್ತೊಂದೆಡೆ ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ಜೇಟ್ಲಿಯವರೇ ಆಗಮಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಪಟ್ಟು ಹಿಡಿದಿರುವ ನೆಲೆಯಲ್ಲಿ ಕೊನೆಗೂ ಜೇಟ್ಲಿಯವರ ಮಧ್ಯಸ್ಥಿಕೆಯಲ್ಲಿ ಗುರುವಾರ ರಹಸ್ಯ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.ಪಕ್ಷದಲ್ಲಿ ಆಂತರಿಕ ಭಿನ್ನಮತ ಉಲ್ಬಣಗೊಳ್ಳುವ ಮೊದಲೇ ಬಂಡಾಯವನ್ನು ಶಮನಗೊಳಿಸುವಲ್ಲಿ ಜೇಟ್ಲಿ ಆಗಮನ ಬಹುತೇಕ ಖಚಿತವಾಗಿದೆ. ನಾಳೆ ರೆಡ್ಡಿ ಸಹೋದರರು ಹಾಗೂ ಮುಖ್ಯಮಂತ್ರಿಗಳ ಜೊತೆ ರಹಸ್ಯ ಸಭೆ ನಡೆಯಲಿದೆ. ನಂತರ ಈಶ್ವರಪ್ಪ ಮತ್ತು ಜೇಟ್ಲಿ, ಸಿಎಂ ನಡುವೆ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಪಕ್ಷದಲ್ಲಿ ತಲೆದೋರಿರುವ ಆಂತರಿಕ ಭಿನ್ನಮತ ಶಮನಕ್ಕೆ ಜೇಟ್ಲಿ ಆಗಮಿಸುವ ಅಗತ್ಯವಿಲ್ಲ ಎಂದು ಈ ಮೊದಲು ಯಡಿಯೂರಪ್ಪ ಅವರು ಹೇಳಿಕೆ ನೀಡಿದ್ದರು. ಆದರೆ ಈಶ್ವರಪ್ಪ ಅದನ್ನು ಬಲವಾಗಿ ವಿರೋಧಿಸಿದ್ದರಿಂದ ಬಂಡಾಯದ ಬಿಸಿ ಮತ್ತಷ್ಟು ಹೆಚ್ಚಾಯಿತು. ಅದರಂತೆ ರೆಡ್ಡಿ ಸಹೋದರರು ಕೂಡ ಸಿಎಂ ಮಾತಿಗೆ ಕಿಮ್ಮತ್ತು ಕೊಡದೆ, ಅವರೇ ಗಡುವು ವಿಧಿಸುವ ಮೂಲಕ ಭಿನ್ನಮತದ ಶಮನ ಸುಲಭ ಸಾಧ್ಯವಲ್ಲ ಎಂದು ಮನಗಂಡ ಮುಖ್ಯಮಂತ್ರಿಗಳು ಜೇಟ್ಲಿ ಅವರ ಮಧ್ಯಸ್ಥಿಕೆಗೆ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. |