ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವದುರ್ಗದ ಜೆಎಂಎಫ್ಸಿ ನ್ಯಾಯಾಲಯ ಮಾಜಿ ಮುಖ್ಯಮಂತ್ರಿ, ಸಂಸದ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಶಿವನಗೌಡ ನಾಯಕ್ ವಿರುದ್ಧ ಶುಕ್ರವಾರ ಬಂಧನದ ವಾರಂಟ್ ಜಾರಿ ಮಾಡಿದೆ.ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವಿಚಾರಣೆ ಕುರಿತಂತೆ ಇಂದು ಕುಮಾರಸ್ವಾಮಿ ಹಾಗೂ ಶಿವನಗೌಡ ನಾಯಕ್ ದೇವದುರ್ಗ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಇಬ್ಬರೂ ಗೈರು ಹಾಜರಾಗಿದ್ದರಿಂದ ನ್ಯಾಯಾಧೀಶರು ಇಬ್ಬರ ವಿರುದ್ಧ ಬಂಧನ ವಾರಂಟ್ ಹೊರಡಿಸಿ ಆದೇಶ ನೀಡಿದರು.ಪ್ರಕರಣದ ವಿವರ: 2008ರಲ್ಲಿ ನಡೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ದೇವದುರ್ಗದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಶಿವನಗೌಡ ನಾಯಕ್ ಪರ ಪ್ರಚಾರ ಮಾಡಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದೇವದುರ್ಗಕ್ಕೆ ತೆರಳಿದ್ದರು. ಆದರೆ ಕುಮಾರಸ್ವಾಮಿ ಅವರು ಅವಧಿ ಮೀರಿ ಆಗಮಿಸಿದ್ದರು ಎಂಬ ಆರೋಪದ ಮೇಲೆ ಎಚ್ಡಿಕೆ, ಶಿವನಗೌಡ(ಹಾಲಿ ಬಿಜೆಪಿ ಸಚಿವ), ಪಕ್ಷದ ಅಧ್ಯಕ್ಷ ರಿಜ್ವಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು.ಆರಂಭದ ವಿಚಾರಣೆಗೆ ಎಚ್.ಡಿ.ಕುಮಾರಸ್ವಾಮಿ ಅವರು ಹಾಜರಾಗಿ ಹೇಳಿಕೆ ನೀಡಿದ್ದರು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಂತರ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. |