ಈ ತಿಂಗಳಾಂತ್ಯದೊಳಗೆ 2009-10ನೇ ಸಾಲಿನ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಕರ್ನಾಟಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಗಳವಾರ ಮಾತನಾಡಿದ ಯಡಿಯೂರಪ್ಪ, ಕೆಲಸ ಕಾರ್ಯಗಳು ಮೊದಲನೇ ತ್ರೈಮಾಸಿಕ ಅವಧಿಯಲ್ಲೇ ಆರಂಭವಾಗಬೇಕು, ಕ್ರಿಯಾ ಯೋಜನೆಯು ಜುಲೈ 31ಕ್ಕೆ ಸಿದ್ಧವಾಗಿರಬೇಕು ಎಂದು ಹೇಳಿದರು.
ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳು ಮೂರನೇ ಅಥವಾ ನಾಲ್ಕನೇ ತ್ರೈಮಾಸಿಕ ಅವಧಿಯವರೆಗೂ ಕಾಯಬಾರದು. ಯಾಕೆಂದರೆ ಇದು ಕಾಮಗಾರಿ ಪೂರ್ಣಗೊಳ್ಳುವುದನ್ನು ವಿಳಂಬ ಮಾಡುತ್ತದೆ ಮತ್ತು ಕೆಲಸದ ಗುಣಮಟ್ಟವೂ ಕುಸಿಯುತ್ತದೆ. ಎಲ್ಲದಕ್ಕೂ ಹೆಚ್ಚಿನದಾಗಿ ಯೋಜನೆಗಳು ಕಾರ್ಯಗತಗೊಳ್ಳದಿದ್ದರೆ ಜನಸಾಮಾನ್ಯರ ತೊಂದರೆ ಮುಂದುವರಿಯುತ್ತದೆ ಎಂದು ಯಡಿಯೂರಪ್ಪ ಹೇಳಿದರು.
ಇತ್ತೀಚೆಗೆ ನಡೆದ 'ಮಂಥನ' ಸಮಾವೇಶದಲ್ಲಿ ಪ್ರತಿಯೊಂದು ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಲಾಗಿದ್ದು, ಇದೇ ಮಾದರಿಯಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿಯೂ ಜನ ಪ್ರತಿನಿಧಿಗಳು ಮತ್ತು ಸಚಿವರ ಉಪಸ್ಥಿತಿಯಲ್ಲಿ ನಡೆಯಬೇಕಾಗಿದೆ ಎಂದು ಅವರು ಹೇಳಿದರು.
'ಮಂಥನ'ದಂತಹ ಕಾರ್ಯಕ್ರಮಗಳಿಂದ ಸಚಿವರು ಮತ್ತು ಅಧಿಕಾರಿಗಳ ನಡುವಣ ಅಂತರ ಕಡಿಮೆ ಮಾಡಬಹುದು ಮತ್ತು ಕಲ್ಯಾಣ ಯೋಜನೆಗಳ ಸಮರ್ಪಕ ಅನುಷ್ಠಾನವೂ ಸರಳ ಹಾಗೂ ಸುಗಮವಾಗುತ್ತದೆ ಎಂದ ಮುಖ್ಯಮಂತ್ರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಕನಿಷ್ಠ 15 ದಿನಕ್ಕೊಮ್ಮೆ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಅರಿತುಕೊಳ್ಳಬೇಕು ಮತ್ತು ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.
ಜನಸ್ಪಂದನಗಳಂತಹಾ ಕಾರ್ಯಕ್ರಮಗಳನ್ನು ನಡೆಸಿ ಸಾಧ್ಯವಾದಷ್ಟು ಬೇಗನೇ ಕ್ರಮ ಕೈಗೊಳ್ಳುವ ಮೂಲಕ ಅಭಿವೃದ್ಧಿ ಕಾರ್ಯಗಳು ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದವರು ಹೇಳಿದರು. |