ಚಿತ್ರ ನಟಿ ರಮ್ಯಾ ಕಾಂಗ್ರೆಸ್ ಸೇರಿರುವುದು ಹರ್ಷ ತಂದಿದೆ. ಯುವ ಪೀಳಿಗೆಯನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಇದು ಪೂರಕವಾಗುತ್ತದೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಸುದ್ದಿಗಾರರಿಗೆ ಈ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಕಾಂಗ್ರೆಸ್ನ ತತ್ವ ಸಿದ್ಧಾಂತ ಒಪ್ಪಿ ಬರುವ ಯಾರನ್ನೇ ಆದರೂ ಪಕ್ಷವು ಸ್ವಾಗತಿಸುತ್ತದೆ. ಇದರಿಂದ ಖಂಡಿತವಾಗಿಯೂ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದರು.
ರಮ್ಯಾ ಅವರು ಪಕ್ಷ ಸೇರಿರುವುದು ಯುವಕರಿಗೆ ಪ್ರೇರಣೆಯಾಗುತ್ತದೆ, ಆಕೆ ಪ್ರತಿಷ್ಠಿತ ಸಿನಿಮಾ ನಟಿಯೂ ಆಗಿರುವುದರಿಂದ ಪಕ್ಷಕ್ಕೆ ಒಳಿತಾಗಲಿದೆ ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ.
ಎಲ್ಲರೂ ಬರಬೇಕು... ನಟಿ ರಮ್ಯಾ ಅವರು ಯುವ ಕಾಂಗ್ರೆಸ್ ಸೇರಿರುವ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, ಯುವ ಜನತೆ ರಾಜಕೀಯಕ್ಕೆ ಬರಬೇಕು. ಇದರಿಂದ ದೇಶಕ್ಕೆ ಒಳ್ಳೆಯದಾಗುತ್ತದೆ. ಕಾಂಗ್ರೆಸ್ ಅಂತೇನಲ್ಲ, ರಮ್ಯಾ ಅಂಥವರು ಯಾವುದೇ ರಾಜಕೀಯ ಪಕ್ಷಕ್ಕಾದರೂ ಬರಬೇಕು. ಒಟ್ಟಿನಲ್ಲಿ ಅವರು ರಾಜಕೀಯವನ್ನು ಉದ್ಧಾರ ಮಾಡಬೇಕು ಎಂದು ಹೇಳಿದ್ದಾರೆ.