ರಾಜಕೀಯದಲ್ಲಿ ಸೋಲು, ಗೆಲುವು ಶಾಶ್ವತವಲ್ಲ ಎಂದು ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೋಲಿನಿಂದ ವಿಚಲಿತರಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಬಂಗಾರಪೇಟೆ, ಜಗಳೂರು ಹಾಗೂ ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಹಣದ ಪ್ರಭಾವದಿಂದ ಜಯ ಸಾಧಿಸಿರುವುದಾಗಿ ಆರೋಪಿಸಿದರು.
ಆದರೂ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿಗಳಿಗೂ ಹಾಗೂ ಅವರನ್ನು ಗೆಲ್ಲಿಸಿದ ಮತದಾರರಿಗೂ ಅಭಿನಂದನೆ ಸಲ್ಲಿಸುವುದಾಗಿ ಈ ಸಂದರ್ಭದಲ್ಲಿ ಹೇಳಿದರು.
ಉಪ ಚುನಾವಣೆಯ ಸೋಲಿನಿಂದ ಕಂಗೆಡುವ ಪ್ರಶ್ನೆಯೇ ಇಲ್ಲ. ನಮ್ಮ ಸೋಲಿನ ಬಗ್ಗೆ ಪರಾಮರ್ಶೆ ಮಾಡುತ್ತೇವೆ. ಆದರೆ ಸರಕಾರದ ವಿರುದ್ಧ ಸಾರಿರುವ ಯುದ್ಧದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದರು.
ಈ ಮೊದಲು ಕೂಡ ಜೆಡಿಎಸ್ ಪಕ್ಷ ಸೋಲು-ಗೆಲುವಿನ ಸಿಹಿ-ಕಹಿಯನ್ನು ಅನುಭವಿಸಿದೆ. ಹಾಗಂತ ಜೆಡಿಎಸ್ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಉಪ ಚುನಾವಣೆ ಗೆಲುವಿನಿಂದಲೇ ಪಕ್ಷದ ಸಾಮರ್ಥ್ಯ ಅಳೆಯುವುದು ಬೇಡ, ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸಿ ಹೋರಾಡುವುದಾಗಿ ತಿಳಿಸಿದರು.