ಶುಂಠಿ, ತುಳಸಿಯನ್ನು ಕುದಿಸಿ ಕುಡಿದರೆ ಕೋಲ್ಡ್ ಮಂಗಮಾಯ

ಶೀತ ಅಥವಾ ಕೆಮ್ಮಿನ ಸಮಯದಲ್ಲಿ ನಾವು ಬೆಚ್ಚಗಿನ ಪಾನೀಯಗಳನ್ನು ಕುಡಿಯಬೇಕು. ಆದರೆ ಬರೀ ಬಿಸಿ ನೀರನ್ನು ಕುಡಿಯುವ ಬದಲು, ಅದರಲ್ಲಿ ಸ್ವಲ್ಪ ಶುಂಠಿ ಮತ್ತು ತುಳಸಿಯನ್ನು ಕುದಿಸಿ ಕುಡಿದರೆ ಅದು ಶೀತ ಕಫಗಳನ್ನು ದೂರ ಮಾಡುತ್ತದೆ. ಹಾಗೆಯೇ ತುಳಸಿ-ಶುಂಠಿ ಸೇರಿಸಿ ಚಹಾ ಕೂಡ ಶೀತವನ್ನು ಓಡಿಸಿ ಸುಲಭವಾಗಿ ಮೂಗಿನ ಮೂಲಕ ಉಸಿರಾಡಲು ಸಹಾಯ ಮಾಡುತ್ತದೆ. ಜೇನುತುಪ್ಪವನ್ನು ಸಣ್ಣ ಶುಂಠಿಯ ತುಂಡಿನ ಜೊತೆ ಅಗಿದು ತಿನ್ನುವುದರಿಂದ ಗಂಟಲಿನ ಸ್ನಾಯುಗಳು ಸಡಿಲಗೊಂಡು ಕೆಮ್ಮನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿರುವ ಖಾರ ಹಾಗು ಜೇನುತುಪ್ಪದ ಉಷ್ಣ ಗುಣ ಕಫವನ್ನು ಕರಗಿಸಲೂ ಸಲಾಯ ಮಾಡುತ್ತದೆ.

photo credit social media

ಇದು ಸಾಮಾನ್ಯ ನೆಗಡಿ. ಇದಕ್ಕೆ ಸರಿಯಾದ ಸಸಯದಲ್ಲಿ ಚಿಕಿತ್ಸೆ ನೀಡದೇ ಹೋದರೆ ಅನೇಕ ದಿನಗಳ ಕಾಲ ಇದು ಮುಂದುವರೆಯುತ್ತೆ. ಮೂಗು ಕಟ್ಟಿದ ಮೇಲೆ, ಶೀತದಿಂದಾಗಿ ಕಣ್ಣುಗಳು ಭಾರ ಆಗುವುದು, ತಲೆನೋವು ಮತ್ತು ತೂಕಡಿಕೆ ಉಂಟಾಗಬಹುದು. ಇದರಿಂದ ದೈನಂದಿನ ಕೆಲಸಗಳ ಮೇಲೆ ಹೆಚ್ಚಿನ ಗಮನ ಹರಿಸಲು ಕಷ್ಟವಾಗಬಹುದು. ಈ ನೆಗಡಿ-ಕೆಮ್ಮುಗಳಿಂದ ಪಾರಾಗೋದು ಹೇಗೆ?

ಮನೆಮದ್ದುಗಳಿಂದ ಈ ನೆಗಡಿ ಮತ್ತು ಕಫವನ್ನು ಹೇಗೆ ಗುಣಪಡಿಸಬಹುದು ಎಂಬ ಚಿಂತೆ ನಿಮಗಿದ್ದರೆ ಅದನ್ನು ಬಿಟ್ಟು ಬಿಡಿ. ಅನೇಕ ಕಾಯಿಲೆಗಳಿಗೆ ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿ ಮದ್ದು ಮಾಡುವುದರಲ್ಲಿ ನಮ್ಮ ಅಜ್ಜಿಯಂದಿರದು ಎತ್ತಿದ ಕೈ.

ಅರಿಶಿನ ಅಏಕ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಒಂದು ವಿಶಿಷ್ಟ ಮನೆಮದ್ದು. ಬೆಚ್ಚಗಿನ ಹಾಲಿಗೆ ಅರಿಶಿನವನ್ನು ಸೇರಿಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ನೆಗಡಿ ಮತ್ತು ಕೆಮ್ಮಿನ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಜೇಷ್ಠಮಧು ಕೆಮ್ಮನ್ನು ಗುಣಪಡಿಸಲು ಅತ್ಯಂತ ಹಳೆಯ ತಂತ್ರಗಳಲ್ಲಿ ಒಂದಾಗಿದೆ. ನಿರಂತರವಾಗಿ ಒಣಕೆಮ್ಮು ಅಥವಾ ಕಫದಿಂದ ಬಳಲುತ್ತಿದ್ದರೆ ಜೇಷ್ಠಮಧು ಎನ್ನುವ ಈ ಒಣ ಕಡ್ಡಿಯನ್ನು ಜಗಿಯಬೇಕು. ಇದರಿಂದ ಒಂದು ರೀತಿಯ ಸಿಹಿ ರಸ ಗಂಟಲಿಗೆ ಸೇರಿ ಹಿತಾನುಭವ ನೀಡುತ್ತದೆ.

ಗಂಟಲು ಕೆರೆತ, ಕೆಮ್ಮನ್ನು ನಿವಾರಿಸಿ ಮತ್ತೇ ಹಿಂದಿನಂತೆ ಆಗಲು ಸಹಾಯ ಮಾಡುತ್ತದೆ. ಇದು ಉಷ್ಣ ಪ್ರಕೃತಿಯ ಮದ್ದು ಆಗಿದ್ದು, ಹೆಚ್ಚಾಗಿ ಸೇವಿಸಬಾರದು. ಅಕಸ್ಮಾತ್​ ಸೇವಿಸಿದರೂ, ನಿತ್ವೂ ಕುಡಿಯುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಗುರು ಬಿಸಿ ನೀರನ್ನು ಕುಡಿಯಬೇಕು. ಇದರಿಂದ ಶರೀರದಲ್ಲಿರುವ ಉಷ್ಣ ಬೆವರು, ಮೂತ್ರದ ರೂಪದಲ್ಲಿ ಹೊರ ಹೋಗುತ್ತದೆ.

ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಿಂದ ನೆಗಡಿ ಮತ್ತು ಕೆಮ್ಮು ಉಂಟುಮಾಡುವ ವೈರಸ್‌ಗಳಿಂದ ರಕ್ಷಣೆ ಸಿಗುತ್ತೆ. ಚಳಿಗಾಲದಲ್ಲಿ ನೆಲ್ಲಿಕಾಯಿ, ಕಿತ್ತಳೆ ಅಥವಾ ನಿಂಬೆಯನ್ನು ಹೆಚ್ಚಾಗಿ ಬಳಸುವುದರಿಂದ ನೆಗಡಿ ಮತ್ತು ಕೆಮ್ಮಿನಿಂದ ಕಾಪಾಡಿಕೊಳ್ಳಬಹುದು.

ನೆಗಡಿ -ಕೆಮ್ಮು ಈ ಮನೆಮದ್ದುಗಳಿಂದ ನಿಯಂತ್ರಣಕ್ಕೆ ಬರುತ್ತಿಲ್ಲ ಎನಿಸಿದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇದು ಚಳಿಗಾಲ ಆದರೂ ಅನೇಕ ವಾರಗಳಿಂದ ನೆಗಡಿ – ಕೆಮ್ಮು ನಿಮಗಿದ್ದರೆ ಈ ಮನೆಮದ್ದುಗಳನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು. ಬೇರೆ ಯಾವುದಾದರೂ ಸಮಸ್ಯೆ ಇದ್ದರೆ ಪತ್ತೆಯಾಗಿ ಪರಿಹಾರ ಸಿಗುತ್ತದೆ.