ಗಾಂಧಿ ವಸ್ತುಗಳನ್ನು ಇರಿಸುವುದೆಲ್ಲಿ?: ಸರ್ಕಾರಕ್ಕೆ ಗೊಂದಲ
ಲಂಡನ್, ಶುಕ್ರವಾರ, 30 ಅಕ್ಟೋಬರ್ 2009( 18:58 IST )
ಮಹಾತ್ಮ ಗಾಂಧಿ ಬರೆದ ಕೆಲವು ಅಪರೂಪದ ಪತ್ರಗಳು ಸೇರಿದಂತೆ ಗಾಂಧೀಜಿಯ ಕೆಲವು ಚಿರಸ್ಮರಣೀಯ ವಸ್ತುಗಳನ್ನು ಎಲ್ಲಿ ಇರಿಸಬೇಕೆಂದು ಸರ್ಕಾರವಿನ್ನೂ ನಿರ್ಧರಿಸಿಲ್ಲ. ರಾಷ್ಟ್ರಪತಿ ಪ್ರತಿಭಾಪಾಟೀಲ್ ಅವರು ತಮ್ಮ ನಾಲ್ಕು ದಿನಗಳ ಬ್ರಿಟನ್ ಭೇಟಿ ಕಾಲದಲ್ಲಿ ಲಂಡನ್ ಭಾರತೀಯ ಸಮುದಾಯದಿಂದ ಈ ಚಿರಸ್ಮರಣೀಯ ವಸ್ತುಗಳನ್ನು ಸ್ವೀಕರಿಸಲಿದ್ದಾರೆ.
ಸ್ಮರಣೀಯ ವಸ್ತುಗಳನ್ನು ಎಲ್ಲಿ ಇರಿಸಬೇಕೆಂಬ ನಿರ್ಧಾರವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕೈಗೊಳ್ಳಲಿದ್ದು, ಗಾಂಧೀಜಿಯ ಪತ್ರಗಳು ಮತ್ತು ಸ್ವತಃ ಗಾಂಧೀಜಿಯೇ ಹೊಲಿದಿದ್ದ ಖಾದಿ ವಸ್ತ್ರವನ್ನು ರಾಷ್ಟ್ರೀಯ ಗಾಂಧಿ ಮ್ಯೂಸಿಯಂನಲ್ಲಿ ಇರಿಸಬೇಕೇ ಅಥವಾ ರಾಷ್ಟ್ರಪತಿ ಭವನದಲ್ಲಿ ಇರಿಸಬೇಕೇ ಎಂದು ಗೊಂದಲದಲ್ಲಿ ಮುಳುಗಿದೆ.
ಈ ಕುರಿತು ವಿಶೇಷ ವಿಮಾನದಲ್ಲಿ ರಾಷ್ಟ್ರಪತಿಯವರನ್ನು ಪ್ರಶ್ನಿಸಿದಾಗ, ಈ ವಸ್ತುಗಳನ್ನು ಭಾರತಕ್ಕೆ ಪೂರ್ಣಗೌರವದೊಂದಿಗೆ ತರಲಾಗುವುದು. ಅವುಗಳನ್ನು ಪ್ರತಿಷ್ಠಾಪಿಸುವ ಸ್ಥಳದ ಬಗ್ಗೆ ನಂತರ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.