ಇಲ್ಲಿ ಭಾರತೀಯರ ಮೇಲೆ ಜನಾಂಗೀಯ ದ್ವೇಷದ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದು, ಇಂತಹ ಹಲ್ಲೆಗಳಿಗೆ ಮೂಲಕಾರಣವು ಜನಾಂಗೀಯ ದ್ವೇಷವಲ್ಲ. ಬದಲಿಗೆ ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿ ಎಂದು ಭಾರತೀಯ ಸಮುದಾಯದ ಜನರು ಭಾವಿಸಿದ್ದಾರೆ.
ಆರ್ಥಿಕ ಪರಿಸ್ಥಿತಿಯ ಕಾರಣ ಆಸ್ಟ್ರೇಲಿಯದ ದುಬಾರಿ ಜೀವನ ವೆಚ್ಚ ಭರಿಸಲು ರಾತ್ರಿ ಅವೇಳೆಯಲ್ಲಿ ಕೆಲಸಗಳಿಗೆ ಹೋಗುವುದು ಅನಿವಾರ್ಯವಾಗಿದ್ದೇ ಇದಕ್ಕೆ ಕಾರಣ ಎಂದು ಅವರು ಭಾವಿಸಿದ್ದಾರೆ.
ರಾತ್ರಿಯ ಅವೇಳೆಯಲ್ಲಿ ಸಂಚರಿಸುವಾಗ ಭಾರತೀಯ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಆಸ್ಟ್ರೇಲಿಯದಲ್ಲಿ ಅನೇಕ ಭಾರತೀಯರು ಭಾವಿಸಿದ್ದಾರೆ. ಜನಾಂಗ ಭೇದ ಒಂದು ಸಮಸ್ಯೆಯಲ್ಲ, ಅವರ ಆರ್ಥಿಕ ದುಸ್ಥಿತಿಯೇ ಕಾರಣ ಎಂದು ಪ್ರೈಮಸ್ ಸಿಇಒ ಮತ್ತು ಪ್ರಮುಖ ಸಮುದಾಯ ಸದಸ್ಯ ರವಿ ಭಾಟಿಯ ಅವರು ತಿಳಿಸಿದ್ದಾರೆ.
ಆಸ್ಟ್ರೇಲಿಯ ಬಹುಸಂಸ್ಕೃತಿಯ ಸಮಾಜವಾಗಿದ್ದು, ಇಲ್ಲಿ ವಿಶ್ವಾದ್ಯಂತ ಎಲ್ಲ ಜನರು ಶಾಂತಿಯುತವಾಗಿ ವಾಸಿಸಲು ಅವಕಾಶ ಕಲ್ಪಿಸಿದೆಯೆಂದು ವಿಕ್ಟೋರಿಯ ಭಾರತೀಯರ ಒಕ್ಕೂಟದ ಶ್ರೀನಿವಾಸ್ ವಾಸನ್ ತಿಳಿಸಿದ್ದಾರೆ. 22 ವರ್ಷ ವಯಸ್ಸಿನ ಸಿಖ್ ಯುವಕ ಬಸ್ ನಿಲ್ದಾಣದಲ್ಲಿ ನಿದ್ರಾವಸ್ಥೆಯಲ್ಲಿದ್ದಾಗ ನಡೆದ ದಾಳಿಯ ಬಗ್ಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಜೂನ್ನಿಂದ ಸೆಪ್ಟೆಂಬರ್ವರೆಗೆ ವಿವಿಧ ಆಸ್ಟ್ರೇಲಿಯ ನಗರಗಳಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಜನಾಂಗೀಯ ದ್ವೇಷದ ದಾಳಿಗಳು ನಡೆದಿವೆಯೆಂದು ಆರೋಪಗಳು ಕೇಳಿಬಂದ ಬಳಿಕ ಆಸ್ಟ್ರೇಲಿಯದ ಬಗ್ಗೆ ಒಳ್ಳೆಯ ಭಾವನೆಗಳು ವ್ಯಕ್ತವಾಗುತ್ತಿದೆ.