ಮಾತುಕತೆಗೆ ಸಿದ್ಧ ಎಂದು ಭಾರತ ನೀಡಿರುವ ಹೇಳಿಕೆಗೆ ಪಾಕಿಸ್ತಾನ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಉಭಯ ರಾಷ್ಟ್ರಗಳ ನಡುವಿನ ಸಮಸ್ಯೆಗಳಿಗೆ ಯುದ್ಧಗಳ ಮೂಲಕ ಪರಿಹಾರ ಕಂಡುಕೊಳ್ಳಬಾರದು ಎಂದು ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ ತಿಳಿಸಿದ್ದಾರೆ.
ಪಾಕಿಸ್ತಾನದ ಜತೆಗೆ ಮಾತುಕತೆಗೆ ಸಿದ್ಧ ಎಂದು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಇತ್ತೀಚೆಗಷ್ಟೇ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಗಿಲಾನಿ, ಯುದ್ಧವು ಪರಿಹಾರವಲ್ಲ; ಮಾತುಕತೆಯೇ ಎಲ್ಲವನ್ನೂ ಪರಿಹರಿಸುತ್ತದೆ ಎಂದರು.
ಜುಲೈಯಲ್ಲಿ ಶರ್ಮ್ ಎಲ್ ಶೇಕ್ನಲ್ಲಿ ಉಭಯ ನಾಯಕರು ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ ನಡೆಸಿದ ಮಾತುಕತೆಯ ಪ್ರತಿಫಲದಿಂದಾಗಿ ಸಿಂಗ್ ಈ ಹೇಳಿಕೆ ನೀಡಿದ್ದಾರೆ ಎಂದಿರುವ ಗಿಲಾನಿ, ಕೈಮೀರಿದ ಸಮಸ್ಯೆಗಳನ್ನು ಬಗೆಹರಿಸಲು ಮಾತುಕತೆಯೊಂದೇ ಪರಿಹಾರವಾಗಿರುವುದರಿಂದ ಭಾರತ ಸಿದ್ಧವಿದೆ ಎಂಬುದನ್ನು ಸಿಂಗ್ ಆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದರು ಎಂದಿದ್ದಾರೆ.
ಮಾತುಕತೆಯಲ್ಲದೆ ಬೇರೆ ಯಾವುದೇ ದಾರಿಯಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ನಾವಿಲ್ಲಿ ಧನಾತ್ಮಕ ಅಂಶಗಳನ್ನು ನೋಡುತ್ತಿದ್ದೇವೆ ಎಂದು ಸಿಂಗ್ ಹೇಳಿಕೆ ಕುರಿತು ಪ್ರತಿಕ್ರಿಯಿಸುವಂತೆ ಪತ್ರಕರ್ತರು ಕೇಳಿದಾಗ ಗಿಲಾನಿ ಉತ್ತರಿಸಿದರು.
ಆದರೆ ಎರಡು ದೇಶಗಳ ನಡುವಿನ ಮಾತುಕತೆಯಲ್ಲಿ ಕಾಶ್ಮೀರದಂತಹ ಪ್ರಮುಖ ಸಮಸ್ಯೆಗಳನ್ನು ಸೇರಿಸಿಕೊಂಡರೆ ಮಾತ್ರ ಸಕಾರಾತ್ಮಕ ಅಂಶಗಳನ್ನು ಕಾಣಬಹುದಾಗಿದೆ ಎಂಬುದನ್ನು ಗಿಲಾನಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ರಮುಖ ಸಮಸ್ಯೆಗಳು ಬಗೆಹರಿಯದ ಹೊರತಾಗಿ, ಶಾಂತಿ ನೆಲೆಗೊಳಿಸುವ ಕನಸು ಕೈಗೂಡದು ಎಂದು ಅವರು ಅಭಿಪ್ರಾಯಪಟ್ಟರು.