ವಿವಾದಿತ ಗಡಿಪ್ರದೇಶ ಅರುಣಾಚಲಕ್ಕೆ ಟಿಬೆಟ್ ಧರ್ಮಗುರು ದಲೈಲಾಮಾ ಭೇಟಿ ನೀಡುವ ಮೂಲಕ ಭಾರತದ ಜತೆ ಬಾಂಧವ್ಯ ಕೆಡಿಸಲು ಯತ್ನಿಸುತ್ತಿದ್ದಾರೆಂದು ಚೀನಾದ ವಿದೇಶಾಂಗ ಸಚಿವಾಲಯ ಮಂಗಳವಾರ ಕಿಡಿಕಾರಿದೆ. ಅರುಣಾಚಲ ಪ್ರದೇಶದ 90,000 ಚದರ ಕಿಮೀ ಪ್ರದೇಶವನ್ನು ಉಲ್ಲೇಖಿಸಿ, ಅದು ತನ್ನದೇ ಪ್ರದೇಶವೆಂದು ಚೀನಾ ಪರಿಗಣಿಸಿದ್ದು ವಿವಾದ ಹುಟ್ಟುಹಾಕಿದೆ.
ಬಹಿಷ್ಕೃತ ಟಿಬೆಟ್ ಧರ್ಮಗುರು ಅವರು ಚೀನಾ ತನ್ನದೆಂದು ಹೇಳುವ ಅರುಣಾಚಲಕ್ಕೆ ಬರುವ ವಾರ ಪ್ರವಾಸ ಏರ್ಪಡಿಸುವ ಮೂಲಕ ಬೀಜಿಂಗ್ ಆದೇಶವನ್ನು ಧಿಕ್ಕರಿಸಿದ್ದು, ಚೀನಾ ಸರ್ಕಾರವು ಅನೇಕ ಬಾರಿ ದಲೈಲಾಮಾ ಭೇಟಿಯನ್ನು ಖಂಡಿಸಿದೆ. ದಲೈಲಾಮಾ ಅರುಣಾಚಲಕ್ಕೆ ಭೇಟಿ ನೀಡದಂತೆ ತಡೆಯಬೇಕೆಂದು ಭಾರತಕ್ಕೆ ಕೂಡ ಕೋರಿದೆ.
ಏಷ್ಯಾದ ಎರಡು ದೈತ್ಯ ರಾಷ್ಟ್ರಗಳ ನಡುವೆ ಬಾಂಧವ್ಯವು ಗಡಿವಿವಾದಗಳ ಸುಳಿಯಿಂದ ಹಳಸಿದ್ದರಿಂದ, ನವೆಂಬರ್ 8ರಿಂದ ಆರಂಭವಾಗುವ ದಲೈಲಾಮಾ ಪ್ರವಾಸದ ಮೇಲೆ ಚೀನಾ ಕೆಂಗಣ್ಣು ಬಿದ್ದಿದ್ದು, ರಾಜತಾಂತ್ರಿಕ ಉದ್ವಿಗ್ನತೆಯ ಕಿಚ್ಚೆಬ್ಬಿಸಿದೆ. ದಲೈಲಾಮಾ ಆಗಾಗ್ಗೆ ಸುಳ್ಳು ಹೇಳುತ್ತಾ, ಇತರೆ ರಾಷ್ಟ್ರಗಳ ಜತೆ ಚೀನಾ ಬಾಂಧವ್ಯಕ್ಕೆ ಧಕ್ಕೆ ಉಂಟುಮಾಡುವ ಕೃತ್ಯಗಳಲ್ಲಿ ತೊಡಗಿದ್ದಾರೆಂದು ಸಚಿವಾಲಯದ ವಕ್ತಾರ ಮಾ ಜಾವೋಕ್ಸು ತಿಳಿಸಿದ್ದಾರೆ.
ಚೀನಾದ ಬಾಂಧವ್ಯ ಕೆಡಿಸುವ ಅವರ ಪ್ರಯತ್ನಕ್ಕೆ ಯಾವು ಫಲವೂ ಸಿಗುವುದಿಲ್ಲವೆಂದು ತಾವು ಆಶಿಸುವುದಾಗಿ ಅವರು ಹೇಳಿದ್ದಾರೆ.