ದಕ್ಷಿಣ ವಜಿರಿಸ್ತಾನದಲ್ಲಿ ಭಾರತವು ಉಗ್ರಗಾಮಿಗಳಿಗೆ ನೆರವು ನೀಡುತ್ತಿದೆಯೆಂದು ಪಾಕಿಸ್ತಾನದ ಸೇನಾಧಿಕಾರಿಯೊಬ್ಬರ ಆರೋಪವನ್ನು ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ತಳ್ಳಿಹಾಕಿದ್ದಾರೆ. ಪಾಕಿಸ್ತಾನದ ಬೆಳವಣಿಗೆಗಳು ಅವರ ಸ್ವಯಂಕೃತ ಅಪರಾಧವಾಗಿದ್ದು, ಅಲ್ಲಿ ಪರಿಣಾಮಕಾರಿ ಸರ್ಕಾರವಿಲ್ಲವೆಂದು ಕೃಷ್ಣ ಟೀಕಿಸಿದ್ದಾರೆ.
ಪಾಕಿಸ್ತಾನದ ಪಡೆಗಳು ಭಾರತದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸಾಹಿತ್ಯ ಮತ್ತು ವೈದ್ಯಕೀಯ ಉಪಕರಣಗಳನ್ನು ಮುಖ್ಯ ಉಗ್ರಗಾಮಿ ನೆಲೆಯಾದ ಶೆರ್ವಾಂಗಿಯಿಂದ ವಶಪಡಿಸಿಕೊಂಡಿದ್ದಾಗಿ ಪಾಕಿಸ್ತಾನದ ಮುಖ್ಯ ಮಿಲಿಟರಿ ವಕ್ತಾರ ಮೇ.ಜ.ಅಥಾರ್ ಅಬ್ಬಾಸ್ ಇತ್ತೀಚೆಗೆ ತಿಳಿಸಿದ್ದರು. ಭಾರತ ತಾಲಿಬಾನ್ಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆಯೆಂದು ಒಳಾಡಳಿತ ಸಚಿವ ರೆಹ್ಮಾನ್ ಮಲಿಕ್ ಸಹ ಇತ್ತೀಚೆಗೆ ಆರೋಪಿಸಿದ್ದರು.
ಎಸ್.ಎಂ.ಕೃಷ್ಣ ಇವೆರಡೂ ಆರೋಪಗಳನ್ನು ಅಲ್ಲಗಳೆದಿದ್ದು, ಬೆಲೂಚಿಸ್ತಾನ ಅಥವಾ ಪಾಕಿಸ್ತಾನದ ಬೆಳವಣಿಗೆಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಇದು ಅವರ ಸ್ವಯಂಕೃತ ಅಪರಾಧವೆಂದು ಕೃಷ್ಣ ತಿಳಿಸಿದ್ದಾರೆ. ದಕ್ಷಿಣ ವಜಿರಿಸ್ತಾನದಲ್ಲಿ ಪಾಕಿಸ್ತಾನದ ಕಾರ್ಯಾಚರಣೆಯಿಂದ ರಾಷ್ಟ್ರದಲ್ಲಿ ಆತ್ಮಾಹುತಿ ಬಾಂಬ್ ದಾಳಿಗಳ ಸರಣಿಯನ್ನೇ ಸೃಷ್ಟಿಸಿದ್ದು, ಅಕ್ಟೋಬರ್ ಮಧ್ಯಾವಧಿಯಿಂದ ಸುಮಾರು 300 ಜನರು ಹತರಾಗಿದ್ದಾರೆ.