ಅರಣ್ಯಗಳಲ್ಲಿ ಸುಖನಿದ್ರೆಯ ಗುಂಗಿನಲ್ಲಿ ಮೈಮರೆಯುವ ಹೆಬ್ಬಾವುಗಳ ಜೀವಕ್ಕೂ ಈಗ ಸಂಚಕಾರ ಉಂಟಾಗಿದ್ದು, ಹೆಬ್ಬಾವಿನ ಚರ್ಮಕಿತ್ತು ಹೊಟೆಲ್ಗಳಿಗೆ ಮತ್ತು ಚರ್ಮವ್ಯಾಪಾರಿಗಳಿಗೆ ಮಾರಾಟ ಮಾಡುವ ದಂಧೆಯಿಂದ ಸುಮಾರು 59 ಹೆಬ್ಬಾವುಗಳನ್ನು ಮಲೇಶಿಯದ ವನ್ಯಜೀವಿ ಅಧಿಕಾರಿಗಳು ರಕ್ಷಿಸಿದ್ದಾರೆ.
ರಾಜಧಾನಿಯ ದಕ್ಷಿಣಕ್ಕಿರುವ ಉಗ್ರಾಣದಿಂದ ಕಳೆದ ಸೋಮವಾರ ಹೆಬ್ಬಾವುಗಳನ್ನು ರಕ್ಷಿಸಲಾಯಿತು ಎಂದು ವನ್ಯಜೀವಿ ಮತ್ತು ರಾಷ್ಟ್ರೀಯ ಉದ್ಯಾನ ಇಲಾಖೆಯ ಮುಖ್ಯಸ್ಥ ಸಹರುದ್ದೀನ್ ಅನಾನ್ ತಿಳಿಸಿದ್ದಾರೆ. ಉಗ್ರಾಣದಲ್ಲಿ ನಾವು ಹೆಬ್ಬಾವುಗಳನ್ನು ಮತ್ತು ಹೆಬ್ಬಾವು ಹಾಗೂ ಹಲ್ಲಿಯ ಚರ್ಮಗಳನ್ನು ಪತ್ತೆಹಚ್ಚಿದವೆಂದು ಅವರು ಹೇಳಿದ್ದಾರೆ.
ಈ ಕುರಿತಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದು, ವನ್ಯಜೀವಿ ಕಾನೂನಿನ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಹೆಬ್ಬಾವನ್ನು ಕೊಂದು ಅದರ ಮಾಂಸವು ಮಲೇಶಿಯ ಹೋಟೆಲುಗಳ ಡಿನ್ನರ್ ಟೇಬಲ್ಲುಗಳಲ್ಲಿ ಅತಿಥಿಗಳಿಗೆ ಸಂತೃಪ್ತಿಪಡಿಸಿದರೆ, ಹೆಬ್ಬಾವಿನ ಚರ್ಮವನ್ನು ದುಬಾರಿ ಚರ್ಮದ ಲಗೇಜ್ ತಯಾರಿಸಿ ಹಾಂಕಾಂಗ್, ಸಿಂಗಪುರ ಮತ್ತು ವಿಯೆಟ್ನಾಂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭರ್ಜರಿ ಮಾರಾಟ ಮಾಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಸಾಂಪ್ರದಾಯಿಕ ಔಷಧಿಗೆ ಬಳಸಲು ಮತ್ತು ವಿದೇಶಗಳಲ್ಲಿ ಅಡುಗೆಮನೆಯಲ್ಲಿ ಔತಣಕೂಟಕ್ಕೆ ಬಳಸುವ ಹೆಬ್ಬಾವುಗಳ ಕಳ್ಳಸಾಗಣೆಯು ಮಲೇಶಿಯದಲ್ಲಿ ಅಪಾಯಕಾರಿ ಮಟ್ಟವನ್ನು ಮುಟ್ಟಿದೆಯೆಂದು ವರದಿಯಾಗಿದೆ.