ಇಸ್ಲಾಮಾಬಾದ್, ಶುಕ್ರವಾರ, 6 ನವೆಂಬರ್ 2009( 17:23 IST )
ಪದೇ ಪದೇ ಉಗ್ರಗಾಮಿಗಳ ಭಯೋತ್ಪಾದನೆ ದಾಳಿಗಳಿಂದ ಪಾಕಿಸ್ತಾನ ತತ್ತರಿಸಿದ ಹೋಗಿದೆ. ಪಾಕಿಸ್ತಾನದ ಪೌರರು ತೀವ್ರ ಆತಂಕದ ಸುಳಿಯಲ್ಲಿ ಸಿಕ್ಕಿದ್ದು, ಜನರು ಭಯದ ವಾತಾವರಣದಿಂದ ಮಾನಸಿಕ ಅಸ್ವಸ್ಥ ಸ್ಥಿತಿಗೆ ತಲುಪಿದ್ದಾರೆಂದು ಮಾನಸಿಕ ತಜ್ಞರು ವಿಶ್ಲೇಷಿಸಿದ್ದಾರೆ. ಎಲ್ಲಿ, ಯಾವಾಗ ಭಯೋತ್ಪಾದನೆ ದಾಳಿ ಸಂಭವಿಸುತ್ತದೆನ್ನುವ ಆಂತಕ ಜನರಲ್ಲಿ ಮನೆಮಾಡಿದೆ.
ಭಯೋತ್ಪಾದನೆ ದಾಳಿಗಳಿಂದ ಜನರು ಗಾಬರಿಗೊಂಡಿದ್ದು, ಮಹಿಳೆಯರು ತಮ್ಮ ಪತಿಯರಿಗೆ, ಮಕ್ಕಳಿಗೆ ಎಚ್ಚರವಾಗಿರುವಂತೆ ಪದೇ ಪದೇ ಸೂಚಿಸುತ್ತಿದ್ದಾರೆ. ಅನೇಕ ಮಂದಿ ಭಯೋತ್ಪಾದನೆ ದಾಳಿಗಳ ಬಳಿಕ ಉಂಟಾಗುವ ಆಘಾತದ ಸ್ಥಿತಿಗೆ ಒಳಗಾಗಿದ್ದಾರೆ.
ಬಂಧುಬಳಗವನ್ನು ಭಯೋತ್ಪಾದನೆ ದಾಳಿಗಳಿಂದ ಕಳೆದುಕೊಂಡ ಜನರ ಮಾನಸಿಕ ಸ್ಥಿತಿಯೇ ಅಸ್ತವ್ಯಸ್ತಗೊಂಡಿದ್ದು, ಅಂತಹವರಿಗೆ ಆಪ್ತಸಲಹೆಗೆ ಒಳಪಡಿಸುವುದು ಅಗತ್ಯವಾಗಿದೆಯೆಂದು ಮಾನಸಿಕ ತಜ್ಞರು ತಿಳಿಸಿದ್ದಾರೆ.