ಆಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ಸಿಬ್ಬಂದಿಯ ಸ್ಥಳಾಂತರವನ್ನು ಯುದ್ಧಪೀಡಿತ ರಾಷ್ಟ್ರದಿಂದ ಪಲಾಯನದ ಕುರುಹೆಂದು ತಪ್ಪಾಗಿ ಭಾವಿಸಬಾರದೆಂದು ವಿಶ್ವಸಂಸ್ಥೆ ಪ್ರಧಾನಕಾರ್ಯದರ್ಶಿ ಬಾನ್ ಕಿ ಮೂನ್ ಸ್ಪಷ್ಟಪಡಿಸಿದ್ದಾರೆ. ಸಿಬ್ಬಂದಿಯ ಸ್ಥಳಾಂತರವನ್ನು ಹಿಂತೆಗೆತ ಅಥವಾ ತೆರವು ಎಂದು ಕೆಲವು ಜನರು ತಪ್ಪಾಗಿ ವಿಶ್ಲೇಷಿಸಿದ್ದಾರೆಂದು ಬಾನ್ ಪತ್ರಕರ್ತರಿಗೆ ತಿಳಿಸಿದರು.
ನಾವು ಆಫ್ಘಾನಿಸ್ತಾನದಿಂದ ತೆರವು ಮಾಡುತ್ತಿಲ್ಲವೆನ್ನುವುದು ಸ್ಪಟಿಕದಷ್ಟೇ ಸ್ಪಷ್ಟವಾಗಿದೆ. ನಾವು ಯಾವುದೇ ಕಾರಣಕ್ಕೂ ಹಿಂಜರಿಯದೇ ನಮ್ಮ ಕೆಲಸವನ್ನು ಮುಂದುವರಿಸುತ್ತೇವೆಂದು ಅವರು ಹೇಳಿದ್ದಾರೆ.
ಆಫ್ಘಾನಿಸ್ತಾನದಲ್ಲಿ ನಮ್ಮ ಸಿಬ್ಬಂದಿಯ ಸಂಕಲ್ಪ ಮತ್ತು ಬದ್ಧತೆ ದೃಢವಾಗಿದೆಯೆಂದು ಕಾಬೂಲ್ನಲ್ಲಿ ವಿಶ್ವಸಂಸ್ಥೆ ಕಾರ್ಯಕರ್ತರ ಮೇಲೆ ದಾಳಿ ಹಿನ್ನೆಲೆಯಲ್ಲಿ ತಮ್ಮ ಇತ್ತೀಚಿನ ಪ್ರವಾಸ ಕುರಿತು ಮಾತನಾಡುತ್ತಾ ಅವರು ಹೇಳಿದ್ದಾರೆ. ಅಂತಾರಾಷ್ಟ್ರೀಯ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಸುಮಾರು 200 ಜನರನ್ನು ಇತರೆ ಕೇಂದ್ರಗಳಿಗೆ ಸಾಗಿಸಲಾಗಿತ್ತೆಂದು ವಿಶ್ವಸಂಸ್ಥೆ ತಿಳಿಸಿದೆ.