ಆಪ್ಘಾನಿಸ್ತಾನದಲ್ಲಿ ಸೆರೆಹಿಡಿದಿದ್ದ ತಾಲಿಬಾನಿಗಳಿಗೆ ಭಾರತೀಯ ವ್ಯಕ್ತಿಯೊಬ್ಬ ಮಸಾಲೆಭರಿತ ಭೋಜನ ಬೇಯಿಸಿಹಾಕಿದ್ದರಿಂದ ಸಂತೃಪ್ತರಾದ ತಾಲಿಬಾನಿಗಳು ಅವನನ್ನು ಬಿಡುಗಡೆ ಮಾಡಿದ್ದಾರೆ. ಸುಮಾರು 24 ದಿನಗಳ ಕಾಲ ತಾಲಿಬಾನ್ ಸೆರೆಯಲ್ಲಿದ್ದ ಭಾರತೀಯನಿಗೆ ತಾಲಿಬಾನಿಗಳು ಸಿಕ್ಕಾಪಟ್ಟೆ ಥಳಿಸಿದ್ದಲ್ಲದೇ ಅವನನ್ನು ಉಪವಾಸ ಕೆಡವಿದ್ದರು.
ಸೋಮೆನ್ ದೇವನಾಥ್ ಎಂಬ ವ್ಯಕ್ತಿಯನ್ನು ತಾಲಿಬಾನಿಗಳು ಸುಮಾರು 3 ವಾರಗಳ ಕಾಲ 10 ಅಡಿ ಅಗಲ 10 ಅಡಿ ಉದ್ದದ ಕತ್ತಲಕೋಣೆಯಲ್ಲಿ ಕಣ್ಣುಗಳಿಗೆ ಬಟ್ಟೆ ಕಟ್ಟಿ ಕುರ್ಚಿಗೆ ಕಟ್ಟಿಹಾಕಿದ್ದರು. ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ 33 ರಾಷ್ಟ್ರಗಳಲ್ಲಿ ಹಮ್ಮಿಕೊಂಡಿದ್ದ ಐದು ವರ್ಷಗಳ ಕಾಲದ ಸೈಕಲ್ ಪ್ರವಾಸದಲ್ಲಿ ಆಫ್ಘಾನಿಸ್ತಾನ ಮಾರ್ಗವಾಗಿ ತೆರಳುತ್ತಿದ್ದಾಗ ತಾಲಿಬಾನಿಗಳ ಕೈಗೆ ಭಾರತೀಯ ಸಿಕ್ಕಿಬಿದ್ದಿದ್ದ. ಅವನನ್ನು ಬೇಹುಗಾರನೆಂದು ಸಂಶಯಿಸಿದ ಶಸ್ತ್ರಸಜ್ಜಿತ ಉಗ್ರಗಾಮಿಗಳು ಅವನನ್ನು ಹೆರಾತ್ನಲ್ಲಿ ಸೆರೆಯಲ್ಲಿಟ್ಟಿದ್ದರು.
ತನ್ನನ್ನು ಸೆರೆಹಿಡಿದವರ ಆದೇಶಗಳನ್ನು ಅರ್ಥಮಾಡಿಕೊಳ್ಳಲು ವಿಫಲನಾಗುತ್ತಿದ್ದ 28ರ ಪ್ರಾಯದ ದೇವನಾಥ್ನನ್ನು ವಿಧೇಯತೆ ತೋರಿಸದೇ ಇರುವುದಕ್ಕಾಗಿ ತಾಲಿಬಾನಿಗಳು ಸತತವಾಗಿ ಥಳಿಸಿ, ಉಪವಾಸ ಕೆಡವಿದ್ದರಲ್ಲದೇ ಅವನನ್ನು ಸಾಯಿಸಿಬಿಡುವುದಾಗಿ ಹೆದರಿಸಿದ್ದರು. ಆದರೆ ತನ್ನನ್ನು ಸೆರೆಹಿಡಿದಾತನೊಬ್ಬನಿಗೆ ಕೊಂಚ ಇಂಗ್ಲಿಷ್ ಜ್ಞಾನವಿರುವುದನ್ನು ಗಮನಿಸಿದ ದೇವನಾಥ್, ಅವರಿಗೆ ಭೋಜನ ಬೇಯಿಸಿಹಾಕಲು ಅವಕಾಶ ನೀಡಬೇಕೆಂದು ಮನದಟ್ಟು ಮಾಡಿದ.
ಅವನು ಬೇಯಿಸಿ ಹಾಕಿದ ಭಾರತೀಯ ಶೈಲಿಯ ಮಸಾಲೆ ತುಂಬಿದ ಅಡುಗೆಯಿಂದ ಸಂಪೂರ್ಣ ಸಂತೃಪ್ತರಾದ ಅಪಹರಣಕಾರರು ಅವನಿಂದ ಯಾವುದೇ ಅಪಾಯವಿಲ್ಲವೆಂದು ಭಾವಿಸುವುದಾಗಿ ಪ್ರತಿಕ್ರಿಯಿಸಿದರು. ಸುಂದರ್ಬನ್ನಲ್ಲಿ ಆಹಾರದಂತೆ ತಾನು ತಾಲಿಬಾನಿಗಳಿಗೆ ಮಸಾಲೆಭರಿತ, ಬಿಸಿಯಾದ ಭಾರತೀಯ ಆಹಾರ ಬಡಿಸಿದ್ದರಿಂದ ಅವರು ಸಂತೃಪ್ತರಾದರೆಂದು ತಿಳಿಸಿದ.
ತಾನು ದುಬಾಷಿ ಜತೆ ಮಾತನಾಡಿ, ತಾನು ಸಾಹಸಯಾತ್ರೆಯ ಉದ್ದೇಶದಿಂದ ಬಂದಿದ್ದೇನೆಯೇ ಹೊರತು ಅವರ ಹೋರಾಟಕ್ಕೆ ಧಕ್ಕೆತರುವ ದುರುದ್ದೇಶವಿಲ್ಲವೆಂದು ಸ್ಪಷ್ಟಪಡಿಸಿದ ಬಳಿಕ ತಾಲಿಬಾನಿಗಳು ಅವನನ್ನು 24 ದಿನಗಳ ಬಳಿಕ ಬಂಧಮುಕ್ತಗೊಳಿಸಿದರು.