ಆಸ್ಟ್ರೇಲಿಯದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ದ್ವೇಷದ ದಾಳಿ ವಿರುದ್ದ ಸೂಕ್ತ ಕ್ರಮಕ್ಕೆ ಆಸ್ಟ್ರೇಲಿಯ ಮುಂದಾಗಿದ್ದರೂ ದಾಳಿಗಳು ಮಾತ್ರ ನಿಂತಿಲ್ಲ. ಮತ್ತೊಂದು ದಾಳಿಯಲ್ಲಿ 22 ವರ್ಷ ವಯಸ್ಸಿನ ಯುವಕ ಬಲಿಪಶುವಾಗಿದ್ದು, ಆಸ್ಟ್ರೇಲಿಯ ಯುವಕರ ಗುಂಪೊಂದು ಭಾರತೀಯ ಯುವಕನ ಮುಖಕ್ಕೆ ಗುದ್ದಿ, ಇಲ್ಲಿ ನಿನಗೆ ಜಾಗವಿಲ್ಲವೆಂದು ಹೇಳಿದ್ದಾರೆ.
ಸಾಯ್ ರತನ್ ತಿವಾರಿ ಎಂಬ ಜಬಲ್ಪುರಕ್ಕೆ ಸೇರಿದ ವ್ಯಕ್ತಿ ದೇವಸ್ಥಾನಕ್ಕೆ ಸ್ನೇಹಿತನ ಜತೆ ಭಾನುವಾರ ತೆರಳುತ್ತಿದ್ದಾಗ, ಇಬ್ಬರು ಆಸ್ಟ್ರೇಲಿಯನ್ನರು ಅವರನ್ನು ನಿಲ್ಲಿಸಿ ಎಲ್ಲಿಗೆ ಹೋಗುತ್ತಿದ್ದೀ ಎಂದು ಕೇಳಿದರು.
ತಾನು ದೇವಸ್ಥಾನಕ್ಕೆ ಹೋಗುತ್ತಿದ್ದೇನೆಂಬುದನ್ನು ಬಹಿರಂಗಪಡಿಸದೇ ಮನೆಗೆ ತೆರಳುತ್ತಿರುವುದಾಗಿ ಹೇಳಿದ ಕೂಡಲೇ ಯುವಕರು ಥಳಿಸಿದರು ಎಂದು ಮಾಹಿತಿ ವ್ಯವಸ್ಥೆ ಪದವಿ ಪಡೆಯಲು ಇಲ್ಲಿಗೆ ಒಂದು ವರ್ಷದ ಹಿಂದೆ ಆಗಮಿಸಿದ ತಿವಾರಿ ತಿಳಿಸಿದ್ದಾರೆ. ಬಲ್ಲಾರತ್ ವಿವಿಯ ವಿದ್ಯಾರ್ಥಿಯಾಗಿದ್ದ ತಿವಾರಿ, ತಾನು ದೇವಸ್ಥಾನಕ್ಕೆ ಹೋಗುತ್ತಿದ್ದೇನೆಂದು ಬಹಿರಂಗಪಡಿಸಲು ಭಯಪಟ್ಟಿದ್ದಾಗಿ ತಿಳಿಸಿದ್ದಾರೆ.
ತಮ್ಮ ಸ್ನೇಹಿತ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ಅವನಿಂದ ಫೋನ್ ಕಸಿದ ದಾಳಿಕೋರರು ಅಲ್ಲಿಂದ ಪರಾರಿಯಾದರು ಎಂದು ಅವರು ಹೇಳಿದ್ದಾರೆ. ನಾವು ಪೊಲೀಸರಿಗೆ ಕರೆ ಕಳುಹಿಸಿದೆವು. ಅವರು 10 ನಿಮಿಷಗಳಲ್ಲಿ ಆಗಮಿಸಿದ ಬಳಿಕ ಆಂಬ್ಯುಲೆನ್ಸ್ ಕೂಡ ಬಂದಿತು. ತನ್ನ ಮೈಯಿಂದ ಬಹಳಷ್ಟು ರಕ್ತ ಸೋರಿಹೋಗಿದ್ದರಿಂದ ತಾನು ಪ್ರಜ್ಞೆತಪ್ಪಿದ್ದಾಗಿ ತಿವಾರಿ ಹೇಳಿದ್ದಾರೆ.