ಪಾಕಿಸ್ತಾನದ ಕೋರ್ಟೊಂದು ಮಾಜಿ ಅಧ್ಯಕ್ಷ ಮುಷರಫ್ ಮತ್ತು ಅವರ ಸಂಗಡಿಗರೊಬ್ಬರಿಗೆ ಮೂರನೇ ಬಾರಿಗೆ ನೋಟಿಸ್ ನೀಡಿದೆ. ಮಾಜಿ ಪ್ರಧಾನಿ ಬೇನಜಿರ್ ಭುಟ್ಟೊ ಹತ್ಯೆಯ ಹಿಂದೆ ಅವರ ಕೈವಾಡವಿದೆಯೆಂದು ಆರೋಪಿಸಿ ಮುಷರಫ್ ಮತ್ತು ಸಹಚರನ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿದ ಅರ್ಜಿಗೆ ಸಂಬಂಧಪಟ್ಟಂತೆ ಈ ನೋಟೀಸ್ ನೀಡಲಾಗಿದೆ.
ಮುಷರಫ್ ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಚೌಧರಿ ಪರ್ವೇಜ್ ಎಲಾಹಿ ಅವರಿಗೆ ಲಾಹೋರ್ ಹೈಕೋರ್ಟ್ ರಾವಲ್ಪಿಂಡಿ ಪೀಠವು ಈ ನೋಟಿಸ್ ನೀಡಿದೆ. ಮುಂದಿನ ತಿಂಗಳ ಮಧ್ಯಾವಧಿಯೊಳಗೆ ನೋಟಿಸ್ಗೆ ಪ್ರತಿಕ್ರಿಯೆ ನೀಡುವಂತೆ ಕೋರ್ಟ್ ಅವರಿಗೆ ಸೂಚಿಸಿದೆ.ನೋಟಿಸ್ ಸ್ವೀಕರಿಸಿದ್ದರೂ ಪ್ರತಿಕ್ರಿಯಿಸಿರದ ಸಂಸದೀಯ ವ್ಯವಹಾರ ಸಚಿವ ಬಾಬರ್ ಅವಾನ್, ಮಾಜಿ ಗುಪ್ತಚರ ಮುಖ್ಯಸ್ಥ ಇಜಾಜ್ ಶಾ ಮತ್ತು ಮಾಜಿ ಸ್ಥಳೀಯ ಆಡಳಿತಾಧಿಕಾರಿ ಇರ್ಫಾನ್ ಎಲಾಹಿ ವಿರುದ್ಧ ಏಕಪಕ್ಷೀಯ ಕ್ರಮ ಕೈಗೊಳ್ಳುವುದಾಗಿ ಕೋರ್ಟ್ ತಿಳಿಸಿದೆ.
ಆಂತರಿಕ ಸಚಿವ ರೆಹ್ಮಾನ್ ಮಲಿಕ್ ಅವರನ್ನು ಕೂಡ ಅರ್ಜಿಯಲ್ಲಿ ಹೆಸರಿಸಲಾಗಿದ್ದು, ಅವರ ವಕೀಲರು ಪ್ರತಿನಿಧಿಸಿದ್ದಾರೆ. ರಾವಲ್ಪಿಂಡಿಯಲ್ಲಿ ಎರಡು ವರ್ಷಗಳ ಹಿಂದೆ ಚುನಾವಣೆ ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದ ಭುಟ್ಟೊ ಆತ್ಮಾಹುತಿ ಬಾಂಬರ್ ಸ್ಫೋಟದಿಂದ ಹತ್ಯೆಗೀಡಾಗಿದ್ದರು.