ಇಸ್ಲಾಮಾಬಾದ್, ಭಾನುವಾರ, 15 ನವೆಂಬರ್ 2009( 12:13 IST )
'ಶಾಂತಿ ಪ್ರಕ್ರಿಯೆಯ ಮಾತುಕತೆಯಲ್ಲಿ ಹೆಚ್ಚಿನ ವಿಳಂಬವಾಗುತ್ತ ಹೋದಂತೆ ಅದರ ಲಾಭವನ್ನು ಕೇವಲ ಭಯೋತ್ಪಾದಕರು ಮಾತ್ರ ಪಡೆದುಕೊಳ್ಳುತ್ತಾರೆ' ಎಂದು ಅಭಿಪ್ರಾಯವ್ಯಕ್ತಪಡಿಸಿರುವ ಪಾಕಿಸ್ತಾನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ, ಆ ನಿಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆಯನ್ನು ಪುನರಾರಂಭಿಸಬೇಕೆಂದು ಕರೆ ನೀಡಿದ್ದಾರೆ.
ನೆರೆಯ ದೇಶಗಳೊಂದಿಗೆ ಪಾಕಿಸ್ತಾನ ಉತ್ತಮ ಸಂಬಂಧ ಹೊಂದಿರಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು. ಭಾರತ ನಮ್ಮೊಂದಿಗಿನ ಮಾತುಕತೆಯನ್ನು ಅರ್ಧಕ್ಕೆ ನಿಲ್ಲಿಸಿದೆ. ಹಾಗಾಗಿ ಭಾರತ ಮತ್ತೆ ಶಾಂತಿ ಮಾತುಕತೆಗೆ ಮುಂದಾಗಬೇಕೆಂದು ಭಾನುವಾರ ತಮ್ಮ ತವರೂರಾದ ಮುಲ್ತಾನ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಎರಡು ದೇಶಗಳ ನಡುವಿನ ಸಮಸ್ಯೆಯ ಪರಿಹಾರಕ್ಕೆ ಯುದ್ದವೊಂದೇ ಪರಿಹಾರವಲ್ಲ ಎಂದು ಪುನರುಚ್ಚರಿಸಿರುವ ಗಿಲಾನಿ, ಇದು ಕೇವಲ ಮಾತುಕತೆಯೊಂದಿಗೆ ಮಾತ್ರ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.