ಬಲೂಚಿಸ್ತಾನದಲ್ಲಿ ಭಾರತದ ಕೈವಾಡ ಬಗ್ಗೆ ಸಾಕ್ಷ್ಯ ಇದೆ: ಪಾಕ್
ಇಸ್ಲಾಮಾಬಾದ್, ಭಾನುವಾರ, 15 ನವೆಂಬರ್ 2009( 17:37 IST )
ಬಲೂಚಿಸ್ತಾನದಲ್ಲಿ ನಡೆಯುವ ಭಯೋತ್ಪಾದನಾ ಕೃತ್ಯದ ಹಿಂದೆ ಭಾರತದ ಕೈವಾಡವಿರುವ ಬಗ್ಗೆ ಸೂಕ್ತ ಸಮಯದಲ್ಲಿ ಸಾಕ್ಷ್ಯವನ್ನು ಬಹಿರಂಗಪಡಿಸುವುದಾಗಿ ಪಾಕಿಸ್ತಾನ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಭಾನುವಾರ ಮತ್ತೊಮ್ಮೆ ಧ್ವನಿ ಎತ್ತಿರುವ ಅವರು, ದೇಶದ ಪರಮಾಣು ಆಸ್ತಿಗಳು ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಹುಟ್ಟೂರಾದ ಮುಲ್ತಾನ್ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಜಿಪ್ಟ್ನ ಶರಮ್ ಎಲ್ ಶೇಕ್ನಲ್ಲಿ ನಡೆದ ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಹಾಗೂ ಜಂಟಿ ಹೇಳಿಕೆಯಲ್ಲಿಯೂ ಪ್ರಸ್ತಾಪಿಸಲಾಗಿದೆ. ಆ ನಿಟ್ಟಿನಲ್ಲಿ ಭಾರತದ ಕೈವಾಡದ ಪ್ರಸ್ತಾಪದ ಕುರಿತು ಸೂಕ್ತ ಸಮಯದಲ್ಲಿ ಹೊರಗೆಡವುದಾಗಿ ಹೇಳಿದರು.
ಬಲೂಚಿಸ್ತಾನ ಪ್ರಾಂತ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಕ್ಕೆ ಭಾರತವೇ ಹೊಣೆ ಎಂದು ಅಕ್ಟೋಬರ್ನಲ್ಲಿ ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ಹೇಳಿಕೆ ನೀಡುವ ಮೂಲಕ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಏತನ್ಮಧ್ಯೆ, ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯದಲ್ಲಿ ಭಾರತದ ಕೈವಾಡ ಇರುವ ಬಗ್ಗೆ ಸಾಕ್ಷ್ಯ ನೀಡುವುದಾಗಿ ಹೇಳಿದ ಅವರು, ತಮ್ಮ ನೆರೆಯ ರಾಷ್ಟ್ರದೊಂದಿಗೆ ಪಾಕ್ ಉತ್ತಮ ಸಂಬಂಧ ಬಯಸುತ್ತದೆ ಎಂದರು. ಅಲ್ಲದೇ, ಭಾರತ ಕೂಡ ಶಾಂತಿ ಪ್ರಕ್ರಿಯೆ ಮಾತುಕತೆಯನ್ನು ಪುನರಾರಂಭಿಸಬೇಕು ಎಂದು ಹೇಳಿದರು.