ಭಯೋತ್ಪಾದಕರು ತಮ್ಮ ಸೃಷ್ಟಿಕರ್ತ ಐಎಸ್ಐ (ಬೇಹುಗಾರಿಕಾ ಸಂಸ್ಥೆ) ವಿರುದ್ಧವೇ ತಿರುಗಿಬಿದ್ದಿರುವುದರಿಂದ ಪಾಕಿಸ್ತಾನದಲ್ಲಿ ಈಗ ಯಾರೊಬ್ಬರೂ ಸುರಕ್ಷಿತರಲ್ಲ ಎಂದು ಇಲ್ಲಿನ ಪ್ರಮುಖ ದೈನಿಕವೊಂದು ಹೇಳಿದೆ.
ಹಿಂದೆಲ್ಲಾ ಭಯೋತ್ಪಾದನೆಗೆ ಬೆಂಬಲ ನೀಡುವ ವಿಷಯದಲ್ಲಿ ಐಎಸ್ಐ ಪ್ರಮುಖ ಪಾತ್ರ ವಹಿಸಿದ್ದುದು ರಹಸ್ಯವಾಗೇನೂ ಉಳಿದಿಲ್ಲ. ಆದರೆ ಈಗ ಕಾಲಚಕ್ರ ತಿರುಗಿದೆ. ಐಎಸ್ಐ ಮತ್ತು ಭಯೋತ್ಪಾದಕರು ಪರಸ್ಪರರ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದು ‘ದಿ ಡೈಲಿ ಟೈಮ್ಸ್’ ಸಂಪಾದಕೀಯದಲ್ಲಿ ಹೇಳಿದೆ.
ಸ್ವಾತ್, ದಕ್ಷಿಣ ವಜಿರಿಸ್ತಾನದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಗೆ ಪ್ರತಿಯಾಗಿ ಉಗ್ರರು ಭದ್ರತೆ, ಕಾನೂನು ಜಾರಿ ಸಂಸ್ಥೆಗಳನ್ನು ದಾಳಿಯ ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಮಹಿಳೆಯರು, ಮಕ್ಕಳು ಸೇರಿ ನೂರಾರು ಸಾಮಾನ್ಯ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ದಾಳಿ ನಡೆಸುವ ಮೂಲಕ ಯಾರೊಬ್ಬರನ್ನೂ ನಾವು ಬಿಡುವುದಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ ಎಂದು ಹೇಳಿದೆ.
ಸೇನೆ ಮತ್ತು ಬೇಹುಗಾರಿಕಾ ಸಂಸ್ಥೆಗಳೆರಡೂ ಹಿಂದೆ ‘ಒಳ್ಳೆಯ ತಾಲಿಬಾನ್’ ‘ಕೆಟ್ಟ ತಾಲಿಬಾನ್’ ಎಂದು ವಿಂಗಡಿಸುವ ಮೂಲಕ ಉಗ್ರರ ಉಪಶಮನಕ್ಕೆ ಯತ್ನಿಸಿದ್ದವು. ಆದರೆ ‘ಒಳ್ಳೆಯ ಉಗ್ರರು’ ಎಂಬುದು ಇಲ್ಲವೇ ಇಲ್ಲ ಎಂಬ ಅಂಶ ನಂತರ ಸೇನೆಗೆ ತಿಳಿಯಿತು. ಶತ್ರು ಗೆರಿಲ್ಲಾದಂತಹ ಯುದ್ಧದಲ್ಲಿ ನಿರತನಾದಾಗ ಉತ್ತಮ ಬೇಹುಗಾರಿಕೆ ಇಲ್ಲದೆ ಯಾವ ಸೇನಾ ಕಾರ್ಯಾಚರಣೆಯೂ ಯಶಸ್ವಿಯಾಗದು ಎಂದು ಸಂಪಾದಕೀಯ ಒತ್ತಿ ಹೇಳಿದೆ.