ಈಗಾಗಲೇ ಸಾಕಷ್ಟು ವಿವಾದಕ್ಕೊಳಗಾಗಿರುವ ಭಾರತೀಯ ಸಂಜಾತ ಲೇಖಕ ಸಲ್ಮಾನ್ ರಶ್ದಿ ಈಗ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ತಮ್ಮ ಪ್ರಬಂಧವೊಂದನ್ನು ನಿರಾಕರಿಸಿದ ಕಾರಣಕ್ಕಾಗಿ ಗ್ರಾಂಟಾ ಸಾಹಿತ್ಯಿಕ ಪತ್ರಿಕೆಯ ಸಂಪಾದಕರನ್ನು ಸೇವೆಯಿಂದ ತೆಗೆಸಿಹಾಕಿದ್ದಾರೆ ಎಂಬ ಆರೋಪ ರಶ್ದಿ ಮೇಲಿದೆ. ಗ್ರಾಂಟಾ ಪತ್ರಿಕೆ ಮಾಲೀಕರು ಅಲೆಕ್ಸ್ ಕ್ಲರ್ಕ್ ಅವರನ್ನು ಸಂಪಾದಕ ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಪ್ರಕಟಿಸಿದಾಗ ಸಾಹಿತ್ಯಿಕ ವಲಯದಲ್ಲಿ ಸಂಚಲನ ಮೂಡಿತು.
‘ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡ’ ಎಂಬಂತೆ ರಶ್ದಿ, ಅಲೆಕ್ಸ್ ಕ್ಲರ್ಕ್ ಕೆಳಗಿಳಿಯಲು ತಾವು ಕಾರಣರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಪ್ರಬಂಧವನ್ನು ಪ್ರಕಟಿಸಲು ನಿರಾಕರಿಸಿದ ನಂತರ ತಾವು ಅಲೆಕ್ಸ್ ಜತೆ ಮಾತನಾಡಿದ್ದಾಗಿಯೂ ರಶ್ದಿ ತಿಳಿಸಿದ್ದಾರೆ.
ಆದರೆ, ಗ್ರಾಂಟಾದ ಹೊಸ ಸಂಪಾದಕ ಜಾನ್ ಫ್ರಿಮನ್ ತಮ್ಮ ನೇತೃತ್ವದ ಮೊದಲ ಸಂಚಿಕೆಯಲ್ಲಿಯೇ ರಶ್ದಿ ಪ್ರಬಂಧ ಪ್ರಕಟಿಸುವುದಾಗಿ ಹೇಳಿದ್ದಾರೆ.1889 ರಲ್ಲಿ ಕೇಂಬ್ರಿಡ್ಜ್ ವಿವಿ ವಿದ್ಯಾರ್ಥಿಗಳು ಗ್ರಾಂಟಾ ಸಾಹಿತ್ಯಿಕ ಪತ್ರಿಕೆಯನ್ನು ಆರಂಭಿಸಿದ್ದರು.