ಭಾರತ ತನ್ನ ಅತಿಯಾದ ಪ್ರಜಾಪ್ರಭುತ್ವದಿಂದ ತಪ್ಪು ಮಾಡಿದ ಏಷ್ಯಾ ರಾಷ್ಟ್ರ ಎಂದು ಮಲೇಶಿಯದ ಮಾಜಿ ಪ್ರಧಾನಮಂತ್ರಿ ಮಹತೀರ್ ಮೊಹಮದ್ ತಿಳಿಸಿದ್ದಾರೆ. ಚೀನಾದ ಅಧಿಕಾರಯುಕ್ತ ಆಡಳಿತದ ಜತೆ ಭಾರತವನ್ನು ಅವರು ಹೋಲಿಸಿ, 'ಭಾರತ ಬೆಳವಣಿಗೆ ಸಾಧಿಸುತ್ತದೆ, ಆದರೆ ಚೀನಾಕ್ಕಿಂತ ನಿಧಾನವಾಗಿ ಬೆಳವಣಿಗೆ ಹೊಂದುತ್ತದೆ.
ಭಾರತ ಜನಸಂಖ್ಯೆ ಹೊಂದಿದ್ದರೂ ಅದನ್ನು ಸದ್ಬಳಕೆ ಮಾಡುತ್ತಿಲ್ಲವೆಂದು' ಮಹತೀರ್ ಟೀಕಿಸಿದರು. ಅವರು ಚೀನಾ, ಜಪಾನ್, ದಕ್ಷಿಣ ಕೊರಿಯ, ತೈವಾನ್ ಮತ್ತು ಸ್ವಲ್ಪ ಮಟ್ಟಿಗೆ ಭಾರತ ಏಷ್ಯಾದ ಹೊಣೆಗಾರಿಕೆಯ ನೇತೃತ್ವ ವಹಿಸುತ್ತವೆ ಎಂದು ಗುರುತಿಸಿದ್ದಾರೆಂದು ನ್ಯೂಸ್ಟ್ರೈಟ್ಸ್ ಟೈಮ್ಸ್ ತಿಳಿಸಿದೆ. ಮಲೇಶಿಯವನ್ನು ಸುಮಾರು 20 ದಶಕಗಳ ಕಾಲ ಆಳಿದ ಮಹತೀರ್, 'ಏಷ್ಯಾ ಮತ್ತು 21ನೇ ಶತಮಾನ 'ಎಂಬ ವಿಚಾರಸಂಕಿರಣದಲ್ಲಿ ಮಾತನಾಡುತ್ತಾ ಜನರು ಪ್ರಜಾಪ್ರಭುತ್ವದ ಮಿತಿಯನ್ನು ಅರಿತಿಲ್ಲ ಎಂದು ಅಭಿಪ್ರಾಯಪಟ್ಟರು.
ಪ್ರಜಾಪ್ರಭುತ್ವವು ಪ್ರಗತಿಗೆ ತೊಡಕಾಗಿದೆ. ಏಕೆಂದರೆ ನೀವು ರಾಜಕೀಯದಲ್ಲಿ ಬಹುಕಾಲ ಮುಳುಗುವುದರಿಂದ ದೇಶದ ಅಭಿವೃದ್ಧಿಗೆ ಹೆಚ್ಚು ಸಮಯ ಸಿಗುವುದಿಲ್ಲ ಎಂದು ವಿವರಿಸಿದರು.ಚೀನಾದಲ್ಲಿ ಅಷ್ಟೊಂದು ರಾಜಕೀಯವಿಲ್ಲ. ಆದ್ದರಿಂದ ದೇಶದ ಅಭಿವೃದ್ಧಿಗೆ ಹೆಚ್ಚು ಕಾಲ ವಿನಿಯೋಗಿಸುತ್ತಾರೆಂದು ಅವರು ವಿಶ್ಲೇಷಿಸಿದರು. ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಪ್ರಗತಿಯ ಅಡಿಗಲ್ಲಾಗಿ ಮಾಡಿದ ಪಶ್ಚಿಮ ರಾಷ್ಟ್ರಗಳನ್ನು ಅವರು ಟೀಕಿಸಿದರು.