'ಜಿಹಾದಿಗಳಿಗೆ ಗ್ರೌಂಡ್ ಜೀರೊ, ಅಣ್ವಸ್ತ್ರ ಒಪ್ಪಂದ ರಿಸ್ಕಿ'
ಟೊರಂಟೊ, ಬುಧವಾರ, 18 ನವೆಂಬರ್ 2009( 14:32 IST )
ಕೆನಡಾದ ಪ್ರಧಾನಮಂತ್ರಿ ಸ್ಟೀಫನ್ ಹಾರ್ಪರ್ ಮತ್ತು ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಅವರು ದ್ವಿಪಕ್ಷೀಯ ಬಾಂಧವ್ಯಗಳನ್ನು ಗಟ್ಟಿಗೊಳಿಸಲು ನಿರ್ಧರಿಸಿರುವ ನಡುವೆ, ಭಾರತ ಮತ್ತು ಕೆನಡಾ ನಡುವೆ ಅಣ್ವಸ್ತ್ರ ಒಪ್ಪಂದ ಅಪಾಯಕಾರಿಯೆಂದು ಕೆನಡಾದ ಮಾಧ್ಯಮ ಪ್ರತಿಕ್ರಿಯಿಸಿದೆ. ಭಾರತದ ಅಣ್ವಸ್ತ್ರಗಳು ಜಿಹಾದಿಗಳ ಪಾಲಿಗೆ 'ಗ್ರೌಂಡ್ ಜೀರೊ' ಆಗಿದ್ದು, ದಾಳಿ ನಡೆಸಲು ಕೇಂದ್ರಬಿಂದುವಾಗಿದೆಯೆಂದು ಪತ್ರಿಕೆಗಳು ಹೇಳಿವೆ.
ಭಾರತದ ಪರಮಾಣು ಸ್ಥಾವರಗಳಿಗೆ ಉಗ್ರಗಾಮಿಗಳ ಬೆದರಿಕೆಯಿರುವ ಹಿನ್ನೆಲೆಯಲ್ಲಿ ಅಣ್ವಸ್ತ್ರ ಒಪ್ಪಂದ ಅಪಾಯಕಾರಿ ಎಂದು ಮಾಧ್ಯಮಗಳು ವಿಶ್ಲೇಷಿಸಿವೆ. ಭಾರತದ ಅಣ್ವಸ್ತ್ರ ಸೌಲಭ್ಯಗಳಲ್ಲಿ ಇತ್ತೀಚೆಗೆ ಕಟ್ಟೆಚ್ಚರ ವಹಿಸಿರುವುದು ಭಾರತದ ಜತೆ ಅಣ್ವಸ್ತ್ರ ಒಪ್ಪಂದಕ್ಕೆ ತುದಿಗಾಲಲ್ಲಿ ನಿಂತಿರುವ ಕೆನಡಾಕ್ಕೆ ಎಚ್ಚರಿಕೆಯ ಗಂಟೆಯೆಂದು ಅವು ವಿಶ್ಲೇಷಿಸಿವೆ.
20ನೇ ಶತಮಾನದ ಪರಿಚಿತ ಮುಖವಾದ ಮಹಾತ್ಮಾ ಗಾಂಧಿಯ ಹೆಸರನ್ನು ಗಾಂಢಿ ಎಂದು ತಪ್ಪಾಗಿ ಉಚ್ಚರಿಸುವ ಕೆನಡಾ ಪತ್ರಕರ್ತರು, ಭಾರತನ್ನು ನಂಬಲು ಸಾಧ್ಯವಿಲ್ಲ. ಏಕೆಂದರೆ ಅದು ಅಣ್ವಸ್ತ್ರ ತಂತ್ರಜ್ಞಾನವನ್ನು ಬಾಂಬ್ಗಳ ತಯಾರಿಕೆಗೆ ಬಳಸಲು ಮುಂದಾಯಿತೆಂದು ಅವು ಹೇಳಿವೆ.