ಇಸ್ಲಾಮಾಬಾದ್, ಗುರುವಾರ, 19 ನವೆಂಬರ್ 2009( 09:39 IST )
ಪಾಕಿಸ್ತಾನ ಉಗ್ರರ ವಿರುದ್ಧ ತೀವ್ರ ಸೇನಾ ಕಾರ್ಯಾಚರಣೆ ನಡೆಸುತ್ತಿದ್ದು, ಇದರಿಂದ ಕಂಗೆಟ್ಟಿರುವ ಉಗ್ರರು ದಕ್ಷಿಣ ವಜಿರಿಸ್ತಾನದಲ್ಲಿ ತಮ್ಮ ವಿರುದ್ಧದ ಸೇನಾ ಕಾರ್ಯಾಚರಣೆ ನಿಲ್ಲಿಸದಿದ್ದರೆ, ನೀರಿನ ಮೂಲ ಹಾಗೂ ಕೆರೆ-ಟ್ಯಾಂಕ್ಗಳಿಗೆ ವಿಷ ಬೆರೆಸುವುದಾಗಿ ತಾಲಿಬಾನ್ ಸಂಘಟನೆ ತೆಹ್ರಿಕ್ ಎ ತಾಲಿಬಾನ್ ಬೆದರಿಕೆ ಒಡ್ಡಿದೆ.
ಇಂತಹ ಬೆದರಿಕೆಯುಳ್ಳ ಪತ್ರವನ್ನು ರಾವಲ್ಪಿಂಡಿ ಕಂಟೋನ್ಮೆಂಟ್ ಹಾಗೂ ಸೇನಾ ಪ್ರಧಾನ ನಿರ್ದೇಶನಾಲಯ ಕಚೇರಿಗೆ ರವಾನಿಸಲಾಗಿದೆ. ಒಂದು ವೇಳೆ ಸೇನಾ ಕಾರ್ಯಾಚರಣೆಯನ್ನು ಕೈಬಿಡದಿದ್ದರೆ, ರಾವಲ್ಪಿಂಡಿ ಮತ್ತು ಚಕ್ಲಾಲ್ ಜಿಲ್ಲೆಗಳ ಸೇನಾ ನೆಲೆಗಳಿಗೆ ಪೂರೈಕೆಯಾಗುವ ನೀರಿನ ಮೂಲಗಳಲ್ಲಿ ವಿಷ ಬೆರೆಸಲಾಗುವುದು. ಈ ಉದ್ದೇಶಕ್ಕಾಗಿಯೇ 200ಲಿ.ನಷ್ಟು ವಿಷ ಖರೀದಿಸಲಾಗಿದೆ ಎಂದು ಉಗ್ರರು ಬೆದರಿಕೆ ಪತ್ರದಲ್ಲಿ ತಿಳಿಸಿದ್ದಾರೆ.
ಏತನ್ಮಧ್ಯೆ ಭಾರತಕ್ಕಿಂತ ಪಾಕಿಸ್ತಾನದ ಬಳಿಯೇ ಹೆಚ್ಚು ಅಣ್ವಸ್ತ್ರಗಳು ಇರುವ ಸಾಧ್ಯತೆ ಇದೆ ಎಂದು ಅಮೆರಿಕದ ಅಣು ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಬಳಿ ಅಂದಾಜು 70-90 ಅಣ್ವಸ್ತ್ರಗಳಿದ್ದರೆ, ಭಾರತದ ಬಳಿ 60-80 ಅಣ್ವಸ್ತ್ರಗಳು ಇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.