ವಿಶ್ವಸಂಸ್ಥೆ, ಗುರುವಾರ, 19 ನವೆಂಬರ್ 2009( 13:36 IST )
ಮಾಜಿ ಪ್ರಧಾನಮಂತ್ರಿ ಬೇನಜಿರ್ ಭುಟ್ಟೊ ಹತ್ಯೆ ತನಿಖೆ ನಡೆಸುತ್ತಿರುವ ವಿಶ್ವಸಂಸ್ಥೆ ತನಿಖಾ ಸಂಸ್ಥೆಯು ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಜತೆ ಪ್ರಾಮಾಣಿಕ ಮತ್ತು ಸೌಹಾರ್ದ ಸಂಭಾಷಣೆಯಲ್ಲಿ ಪ್ರಶ್ನಿಸಿದ್ದಾರೆ. ಹತ್ಯೆಯ ಹಿಂದಿನ ಸತ್ಯಾಂಶಗಳು ಮತ್ತು ಸಂದರ್ಭಗಳ ಪರಿಶೀಲನೆ ನಡೆಸಿದ ಸಂಸ್ಥೆ ತನ್ನ ತನಿಖೆಯಲ್ಲಿ ಹತ್ತಾರು ಮಂದಿ ಅಧಿಕಾರಿಗಳ ತನಿಖೆ ನಡೆಸಿದ್ದಾರೆಂದು ಪ್ರಧಾನಕಾರ್ಯದರ್ಶಿ ಕಚೇರಿಯ ವಕ್ತಾರ ಪತ್ರಕರ್ತರಿಗೆ ಗುರುವಾರ ತಿಳಿಸಿದ್ದಾರೆ.
ಮುಷರಫ್ ಜತೆ ಪ್ರಾಮಾಣಿಕ ಮುಕ್ತ ಮತ್ತು ಸೌಹಾರ್ದ ಸಂಭಾಷಣೆ ನಡೆಯಿತೆಂದು ತನಿಖಾ ಸಮಿತಿ ತಿಳಿಸಿದ್ದಾಗಿ ವಕ್ತಾರ ಹೇಳಿದ್ದಾರೆ. ಭೇಟಿಯ ಸ್ಥಳವನ್ನು ವಿಶ್ವಸಂಸ್ಥೆ ಬಹಿರಂಗ ಮಾಡಿರದಿದ್ದರೂ, ಅ.27ರಂದು ಫಿಲಾಡೆಲ್ಫಿಯದಲ್ಲಿ ಭೇಟಿ ನಡೆಯಿತೆಂದು ಮುಷರಫ್ ವಕ್ತಾರ ನಸೀಂ ಅಶ್ರಾಫ್ ಹೇಳಿಕೆ ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ.
ಮುಷರಫ್ ಅವರು ತಾವು ತಂಡವನ್ನು ಭೇಟಿ ಮಾಡಿದಾಗ, ಪಾಕಿಸ್ತಾನದ ಸ್ಥಳೀಯ ವ್ಯವಹಾರಗಳ ಬಗ್ಗೆ ಅಂತಾರಾಷ್ಟ್ರೀಯ ತನಿಖೆ ನಡೆಸುವುದಕ್ಕೆ ತೀವ್ರವಾಗಿ ವಿರೋಧಿಸಿದ್ದಾಗಿ ಹೇಳಿದರೆಂದು ಡಾನ್ ಸುದ್ದಿಪತ್ರಿಕೆ ವರದಿ ಮಾಡಿದೆ. ಬೇನಜೀರ್ ಭುಟ್ಟೊ ಅವರು ರಾವಲ್ಪಿಂಡಿಯ ಗ್ಯಾರಿಸನ್ ನಗರದಲ್ಲಿ ರ್ಯಾಲಿಯಲ್ಲಿ ಭಾಗವಹಿಸಿದ್ದಾಗ ಬಂದೂಕು ಮತ್ತು ಬಾಂಬ್ ದಾಳಿಯಲ್ಲಿ ಮೃತರಾಗಿದ್ದರು.
ಮುಷರಫ್ ಸರ್ಕಾರದ ತನಿಖೆಗಳಲ್ಲಿ ವಾಯವ್ಯ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಬೈತುಲ್ಲಾ ಮೆಹ್ಸೂದ್ ಮೇಲೆ ಬೆಟ್ಟು ಮಾಡಿತ್ತು.ಆದರೆ ಭುಟ್ಟೊ ಬೆಂಬಲಿಗರು ಪಾಕ್ ತನಿಖೆಗಳ ಬಗ್ಗೆ ಅತೃಪ್ತರಾಗಿದ್ದು, ಹತ್ಯೆಯಲ್ಲಿ ಮುಷರಫ್ ಕೂಡ ಭಾಗಿಯೆಂದು ಆರೋಪಿಸಿದ್ದರು. ಅಸೀಫ್ ಅಲಿ ಜರ್ದಾರಿ ಪಾಕ್ ಅಧ್ಯಕ್ಷರಾದ ಬಳಿಕ, ಸ್ವತಂತ್ರ ತನಿಖೆ ನಡೆಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಲಾಗಿತ್ತು.