ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಗೆ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ನೀಡಿದ ಗಣನೀಯ ಕೊಡುಗೆ ಹಿನ್ನೆಲೆಯಲ್ಲಿ ಶಾಂತಿ, ನಿಶ್ಶಸ್ತ್ರೀಕರಣ ಮತ್ತು ಅಭಿವೃದ್ಧಿ ಕುರಿತ ಪ್ರತಿಷ್ಠಿತ ಇಂದಿರಾಗಾಂಧಿ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಅಂತಾರಾಷ್ಟ್ರೀಯ ತೀರ್ಪುಗಾರರು ಶೇಖ್ ಹಸೀನಾಗೆ ಪ್ರಶಸ್ತಿ ನೀಡುವ ನಿರ್ಧಾರ ಕೈಗೊಂಡರು ಎಂದು ಇಂದಿರಾಗಾಂಧಿ ಸ್ಮಾರಕ ಟ್ರಸ್ಟ್ ತಿಳಿಸಿದೆ.
62ರ ಪ್ರಾಯದ ಹಸೀನಾ ಅವರು ಬಡತನ ನಿವಾರಣೆಗೆ ಕೈಗೊಂಡ ದೃಢ ಕ್ರಮಗಳು, ಜನತೆಗೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ ಸಾಧಿಸಿದ ಸುಸ್ಥಿರ ಅಭಿವೃದ್ಧಿ ಹಾಗೂ ಶಾಂತಿ ಕುರಿತ ಬದ್ಧತೆ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆಂದು ಟ್ರಸ್ಟ್ ತಿಳಿಸಿದೆ. ಡಿಸೆಂಬರ್ನಲ್ಲಿ ಮರುಆಯ್ಕೆಗೊಂಡ ಬಳಿಕ '2021 ಮುನ್ನೋಟ' ಗುರಿಯೊಂದಿಗೆ ಬಡತನ ಮತ್ತು ಅಸಮಾನತೆ ನಿವಾರಣೆ ಮಾಡುವ ಮೂಲಕ ಬಾಂಗ್ಲಾದೇಶವನ್ನು ಮಧ್ಯಮಆದಾಯ ರಾಷ್ಟ್ರವಾಗಿ ಪರಿವರ್ತಿಸುವ ಗುರಿ ಹೊಂದಿದ್ದರೆಂದು ಟ್ರಸ್ಟ್ ತಿಳಿಸಿದೆ.
1996 ಮತ್ತು 2001ರ ನಡುವೆ ಬಾಂಗ್ಲಾ ಪ್ರಧಾನಿಯಾಗಿ ಬಡವರ ಮತ್ತು ದುರ್ಬಲರ ಮೂಲಭೂತ ಅಗತ್ಯ ಪೂರೈಸಲು ಉದ್ಯೋಗ ಸೃಷ್ಟಿ, ವಸತಿ, ಆರೋಗ್ಯ ಮತ್ತು ಆಹಾರಭದ್ರತೆ ಯೋಜನೆಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆರಂಭಿಸಿದರೆಂದು ಟ್ರಸ್ಟ್ ಶ್ಲಾಘಿಸಿದೆ. ಈ ಪ್ರಶಸ್ತಿಯು 25 ಲಕ್ಷ ರೂ. ನಗದುಹಣ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದ್ದು, ನಂತರದ ದಿನ ನಡೆಯುವ ಸಮಾರಂಭದಲ್ಲಿ ವಿತರಿಸಲಾಗುತ್ತದೆ.